ಮಹಾಕುಂಭ ಮೇಳ
ಮಹಾಕುಂಭ ನಗರ: ಶ್ರೀ ಪಂಚದರ್ಶನಂ ಜುನಾ ಅಖಾರಾ ನೇತೃತ್ವದಲ್ಲಿ ಇಲ್ಲಿ ನಡೆದ ಧಾರ್ಮಿಕ ಸಂವಾದ ಸಭೆಯು ‘ಸನಾತನ ವೇದಿಕ ರಾಷ್ಟ್ರ ನಿರ್ಮಾಣ’ ಕುರಿತು ನಿರ್ಣಯ ಕೈಗೊಂಡಿದೆ.
ಜುನಾ ಅಖಾರಾದ ಮುಖ್ಯ ಪೋಷಕರಾದ ಮಹಾಂತ ಹರಿ ಗಿರಿ ಮಹಾರಾಜ್ ಅವರು, ‘ಸನಾತನ ಧರ್ಮ ರಕ್ಷಿಸುವಲ್ಲಿ ಮಹಾಮಂಡಲೇಶ್ವರ ಯತಿ ನರಸಿಂಗಾನಂದ ಗಿರಿ ಅವರು ಕೈಗೊಳ್ಳುತ್ತಿರುವ ಎಲ್ಲ ಪ್ರಯತ್ನಗಳನ್ನು ಬೆಂಬಲಿಸಲಾಗುವುದು’ ಎಂದು ಪ್ರತಿಜ್ಞಾವಿಧಿ ಕೈಗೊಂಡರು.
ಇಸ್ಲಾಮಿಕ್ ಜಿಹಾದ್ನಿಂದ ವಿಶ್ವದಾದ್ಯಂತ ಹಿಂದೂಗಳ ಮೇಲೆ ದೌರ್ಜನ್ಯ ನಡೆದಿದೆ ಎಂದು ಸಭೆಯು ಕಳವಳ ವ್ಯಕ್ತಪಡಿಸಿತು. ಸ್ವಾಮಿ ನರೇಂದ್ರಾನಂದ ಸರಸ್ವತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಅಲ್ಲದೆ, ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಹಕ್ಕುಗಳನ್ನು ರಕ್ಷಿಸುವಂತೆ ಧ್ವನಿ ಎತ್ತಬೇಕು ಎಂದು ಧಾರ್ಮಿಕ ಸಂವಾದ ಸಭೆಯು ಹಿಂದೂ ಸಮುದಾಯದವರಿಗೆ ಆಗ್ರಹಪಡಿಸಿತು.
ಪ್ರಮುಖ ಸಂತರಾದ ಜಗದ್ಗುರು ಪರಮಹಂಸಚಾರ್ಯ ಮಹಾರಾಜ್, ಮಹೇಂದ್ರಾನಂದ ಗಿರಿ, ಮಹಾಮಂಡಲೇಶ್ವರ್ ಅನ್ನಪೂರ್ಣ ಭಾರ್ತಿ ಮತ್ತು ಮಹಾಮಂಡಲೇಶ್ವರ ಜೈ ಅಂಬಾನಂದ ಗಿರಿ ಅವರು ಸಂವಾದಲ್ಲಿ ಪಾಲ್ಗೊಂಡಿದ್ದು, ಅಭಿಪ್ರಾಯ ಹಂಚಿಕೊಂಡರು.
‘ಎರಡು ದಿನದ ಈ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಂತರು, ಭಕ್ತರು ಪಾಲ್ಗೊಂಡಿದ್ದರು. ಯತಿ ನರಸಿಂಗಾನಂದ ಗಿರಿ ಅವರ ಕರೆಗೆ ಓಗೊಟ್ಟು, ಸನಾತನ ಧರ್ಮದ ರಕ್ಷಣೆ ಮತ್ತು ಸನಾತನ ವೇದಿಕ ರಾಷ್ಟ್ರ ನಿರ್ಮಾಣ ಗುರಿ ಸಾಕಾರಗೊಳಿಸಲು ಬದುಕನ್ನು ಮುಡಿಪಾಗಿಡುವ ಪ್ರತಿಜ್ಞಾವಿಧಿ ಸ್ವೀಕರಿಸಿದರು’ ಎಂದು ಯತಿ ನರಸಿಂಗಾನಂದ ಸರಸ್ವತಿ ಟ್ರಸ್ಟ್ನ ಕಾರ್ಯದರ್ಶಿ ಉದಿತ ತ್ಯಾಗಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.