ADVERTISEMENT

ಅಯೋಧ್ಯೆಯಲ್ಲಿ ಧರ್ಮಸಭೆ ಆತಂಕದಲ್ಲಿ ಜಿಲ್ಲಾಡಳಿತ

ಪೊಲೀಸ್‌ ಇಲಾಖೆಗೆ ಕಾನೂನು, ಸುವ್ಯವಸ್ಥೆ ಚಿಂತೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2018, 18:51 IST
Last Updated 18 ನವೆಂಬರ್ 2018, 18:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಮುಂದಿನ ವಾರ ಅಯೋಧ್ಯೆಯಲ್ಲಿ ಆಯೋಜಿಸಿರುವ ರಾಮ ಭಕ್ತರ ಧರ್ಮಸಭೆಯಲ್ಲಿ ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ.

ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆಗೆ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಯ ಚಿಂತೆ ಶುರುವಾಗಿದೆ. ಧರ್ಮಸಭೆಯಲ್ಲಿ ರಾಮಮಂದಿರ ನಿರ್ಮಾಣ ಪ್ರಮುಖವಾಗಿ ಚರ್ಚೆಯಾಗಲಿದೆ ಎಂದು ವಿಎಚ್‌ಪಿ ಮೂಲಗಳು ತಿಳಿಸಿವೆ.

ಬಡಾ ಭಕ್ತಮಲ್‌ ಗಾರ್ಡನ್‌ ಮೈದಾನದಲ್ಲಿ ಈ ಧರ್ಮಸಭೆ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳಲು ದೇಶದ ನಾನಾ ಭಾಗಗಳಿಂದ ಸಾಧು, ಸಂತರು, ಬಿಜೆಪಿ ಕಾರ್ಯಕರ್ತರು ಮತ್ತು ಹಿಂದುತ್ವ ಪರ ಸಂಘಟನೆಗಳ ಸದಸ್ಯರು ಸೇರಿ ಲಕ್ಷಕ್ಕೂ ಹೆಚ್ಚು ಜನರು ನವೆಂಬರ್‌ 25ರಂದು ಅಯೋಧ್ಯೆಗೆ ಬಂದಿಳಿಯಲಿದ್ದಾರೆ ಎಂದು ವಿಎಚ್‌ಪಿ ಹೇಳಿದೆ.

ADVERTISEMENT

ಅಯೋಧ್ಯೆಯಲ್ಲಿ ಭಾರಿ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವಂತೆ ಜಿಲ್ಲಾಡಳಿತವು ಪೊಲೀಸ್‌ ಇಲಾಖೆಗೆ ಸೂಚಿಸಿದೆ.ಕಾನೂನು ಮತ್ತು ಸುವ್ಯವಸ್ಥೆ ಹೊಣೆ ಹೊತ್ತ ಪೊಲೀಸರು ಧರ್ಮಸಭೆಯಲ್ಲಿ ಪಾಲ್ಗೊಳ್ಳಲು ಬರುತ್ತಿರುವ ಜನರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇಷ್ಟೊಂದು ಸಂಖ್ಯೆಯ ಜನರು ಏಕಕಾಲಕ್ಕೆ ಒಂದೆಡೆ ಸೇರುವುದರಿಂದ ಆ ಜನಜಂಗುಳಿಯನ್ನು ನಿರ್ವಹಿಸುವುದು ನಿಜಕ್ಕೂ ಸವಾಲಿನ ಕೆಲಸ ಎಂದು ಪೊಲೀಸ್‌ ಇಲಾಖೆ ಹೇಳಿದೆ.

ಈ ನಡುವೆ ತಮಗೆ ಸೂಕ್ತ ರಕ್ಷಣೆ ನೀಡುವಂತೆ ಮುಸ್ಲಿಂ ಸಮುದಾಯವು ಪೊಲೀಸರಿಗೆ ಮನವಿ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.