ನವದೆಹಲಿ: ಕೋವಿಡ್ ನಿಯಂತ್ರಣ ವಿಚಾರದಲ್ಲಿ ನರೇಂದ್ರ ಮೋದಿ ಸರ್ಕಾರದ ಅಸಮರ್ಥತೆ ಮತ್ತು ದುರಹಂಕಾರದಿಂದಾಗಿ ದೇಶದ ಜನಜೀವನ ಮತ್ತು ಆರ್ಥಿಕತೆ ಮೇಲೆ ಹಾನಿಯುಂಟಾಗುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಸರ್ಕಾರದ ನೀತಿಗಳಿಂದಾಗಿ ಸಮಾಜದ ಪ್ರತಿಯೊಂದು ವರ್ಗದವರೂ ತೊಂದರೆಗೀಡಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಸರ್ಕಾರವನ್ನು ಟೀಕಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, ‘ಕೊರೊನಾ ವೈರಸ್ ಮೇಲೆ ನಿಯಂತ್ರಣವಿಲ್ಲ, ಸಾಕಷ್ಟು ಲಸಿಕೆ ಇಲ್ಲ, ಉದ್ಯೋಗವಿಲ್ಲ, ಕಾರ್ಮಿಕರು ಮತ್ತು ರೈತರ ಸಮಸ್ಯೆಗಳನ್ನು ಕೇಳುವವರಿಲ್ಲ, ಮಧ್ಯಮ–ಸಣ್ಣ–ಸೂಕ್ಷ್ಮ ಉದ್ದಿಮೆಗಳಿಗೆ ರಕ್ಷಣೆಯಿಲ್ಲ, ಮಧ್ಯಮ ವರ್ಗದವರು ತೃಪ್ತರಾಗಿಲ್ಲ... ಮಾವಿನ ಹಣ್ಣನ್ನು ತಿನ್ನುವುದು ಸರಿ, ಆದರೆ ಜನಸಾಮಾನ್ಯರನ್ನಾದರೂ ಬಿಟ್ಟುಬಿಡಿ (ಆಮ್ ಖಾನಾ ಠೀಕ್ ಥಾ, ಆಮ್ ಜನ್ ಕೊ ತೋ ಛೋಡೇ ದೇತೆ!’) ಎಂದು ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಖಾತೆಯಿಂದಲೂ ಕೇಂದ್ರದ ವಿರುದ್ಧ ಟೀಕಾಪ್ರಹಾರ ನಡೆಸಲಾಗಿದೆ.
‘ಒಂದು ವರ್ಷ ಕಳೆಯಿತು, ದೇಶದ ಜನಜೀವನ ಮತ್ತು ಆರ್ಥಿಕತೆ ಮೇಲೆ ಹಾನಿಯಾಗುತ್ತಿರುವುದು ಮುಂದುವರಿದಿದೆ. ಅಸಮರ್ಥತೆ ಮತ್ತು ದುರಹಂಕಾರಕ್ಕಾಗಿ ಜನರು ಮೋದಿ ಸರ್ಕಾರಕ್ಕೆ ಧನ್ಯವಾದ ಹೇಳುತ್ತಿದ್ದಾರೆ’ ಎಂದು ಪಕ್ಷದ ಟ್ವೀಟ್ನಲ್ಲಿ ಉಲ್ಲೇಖಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.