ADVERTISEMENT

ನನ್ನ ಕೇಳದೇ ನನಗೆ ಜನ್ಮಕೊಟ್ಟಿರೇಕೆ? ಹೆತ್ತವರ ವಿರುದ್ಧ ಮಗ ಮೊಕದ್ದಮೆ!

ಜೀವ ಹುಟ್ಟಿಸಿ ನರಕಕ್ಕೆ ತಳ್ಳದಿರಿ..

ಏಜೆನ್ಸೀಸ್
Published 7 ಫೆಬ್ರುವರಿ 2019, 12:03 IST
Last Updated 7 ಫೆಬ್ರುವರಿ 2019, 12:03 IST
   

ತನ್ನ ಸಮ್ಮತಿಯಿಲ್ಲದೆಯೇ ತನ್ನ ಸೃಷ್ಟಿಗೆ ಕಾರಣರಾದ ತಂದೆ–ತಾಯಿಯ ವಿರುದ್ಧ ಮೊಕದ್ದಮೆ ಹೂಡಲು ಮುಂಬೈನ ರಫೇಲ್‌ ಸ್ಯಾಮ್ಯುಲ್‌(27) ಮುಂದಾಗಿದ್ದಾರೆ.

ವಿಚಿತ್ರವಾಗಿ ತೋರುತ್ತಿರುವ ಆತನ ಧೋರಣೆ ಮತ್ತು ವಿವರ ಹೀಗಿದೆ;

ಹೆಸರು: ರಫೇಲ್‌ ಸ್ಯಾಮ್ಯುಲ್‌

ADVERTISEMENT

ವಯಸ್ಸು: 27 ವರ್ಷ

ಸ್ಥಿತಿ: ಜೀವಂತ ಮತ್ತು ಅದಕ್ಕಾಗಿ ಪರಿತಪಿಸುತ್ತಿದ್ದೇನೆ

ಏಕೆಂದರೆ, ಆತ ತಾನು ಹುಟ್ಟುವುದಕ್ಕಾಗಿ ಕೇಳಿಕೊಂಡಿರಲಿಲ್ಲ! ನಾನು, ನೀವೂ ಸಹ ಹುಟ್ಟುವ ಮುನ್ನ ಯೋಜನೆ ರೂಪಿಸಿ ಸಮ್ಮತಿ ನೀಡಿರಲಿಲ್ಲ. ಹುಟ್ಟಿನ ಕುರಿತು ವಿರೋಧ ಧೋರಣೆ(ಆ್ಯಂಟಿನಾಟಲಿಸ್ಟ್‌) ಹೊಂದಿರುವ ಸ್ಯಾಮ್ಯುಲ್‌ ತನ್ನ ತಂದೆ–ತಾಯಿ ವಿರುದ್ಧ ಮೊಕದ್ದಮೆ ಹೂಡಲು ಮುಂದಾಗಿದ್ದಾರೆ.

ಪಾಲಕರ ಸಂತೋಷಕ್ಕಾಗಿ ಮಗುವಿಗೆ ಜನ್ಮ ನೀಡಿ ಹುರುಳಿಲ್ಲದ ಜೀವವದ ಭಾಗವಾಗಿಸುವುದಕ್ಕೆ ಸ್ಯಾಮ್ಯುಲ್‌ ವಿರೋಧ ವ್ಯಕ್ತಪಡಿಸಿದ್ದಾರೆ. 'ನನ್ನ ಪಾಲಕರನ್ನು ನಾನು ಪ್ರೀತಿಸುತ್ತೇನೆ. ನಮ್ಮ ನಡುವಿನ ಸಂಬಂಧ ಸೊಗಸಾಗಿದೆ. ಆದರೆ, ಅವರ ಸಂತೋಷಕ್ಕಾಗಿ ನನ್ನನ್ನು ಹೆತ್ತಿದ್ದಾರೆ’ ಎಂದು ದಿ ಪ್ರಿಂಟ್‌ಗೆ ಪ್ರತಿಕ್ರಿಯಿಸಿರುವುದಾಗಿ ವರದಿಯಾಗಿದೆ.

'ನನ್ನ ಬದುಕು ಸುಂದರವಾಗಿದೆ. ಆದರೆ, ನಾನೇಕೆ ಮತ್ತೊಂದು ಜೀವವನ್ನು ಶಾಲೆ, ಕೆಲಸ...ಇಂಥ ಜಂಜಡ ಬದುಕಿನಲ್ಲಿ ಸಿಲುಕಿಸಲಿ..’ ಎಂದೆಲ್ಲ ಹೇಳಿದ್ದಾರೆ. ಸ್ಯಾಮ್ಯುಲ್‌ ನಿಹಿಲಾನಂದ ಹೆಸರಿನ ಫೇಸ್‌ಬುಕ್‌ ಪುಟ ಹೊಂದಿದ್ದು, ಜನ್ಮ ನೀಡುವುದಕ್ಕೆ ವಿರೋಧಿಯಾದಂತಹ ಪೋಸ್ಟ್‌ಗಳನ್ನು ಹಾಕುತ್ತಿರುತ್ತಾರೆ. ನೂರಾರು ಜನರು ಈ ಪುಟವನ್ನು ಹಿಂಬಾಲಿಸುತ್ತಿದ್ದಾರೆ.

’ಪಾಲಕರೆಲ್ಲರೂ ಕಪಟದಾರಿಗಳು’ ಎಂಬ ಸಂದೇಶವನ್ನು ಒಳಗೊಂಡ ಚಿತ್ರವನ್ನು ಪೋಸ್ಟ್ ಮಾಡಿದ್ದು, ’ಉತ್ತಮ ಪಾಲಕರು ಮಗುವನ್ನು ಅಗತ್ಯ ಮತ್ತು ಅವಶ್ಯಕತೆಗಳಿಗಿಂತ ಎತ್ತರದಲ್ಲಿರಿಸುತ್ತಾರೆ...ಆದರೆ, ಸ್ವತಃ ಮಗುವೇ ಪಾಲಕರ ಅಗತ್ಯವಾಗಿರುತ್ತದೆ’ ಎಂಬ ಬರಹಗಳಿವೆ.

ಆತನ ಬರಹಗಳು...

'ನಿಜಕ್ಕೂ ಪಾಲಕರಿಗೆ ತನ್ನ ಮಗುವಿಗೆ ಏನು ಬೇಕೆಂದು ತಿಳಿದಿದ್ದರೆ...ಆ ಮಗುವನ್ನು ಯಾಕಾಗಿ ಹೆತ್ತರು?’

'ಈ ಜಗತ್ತಿನ ಮಗುವನ್ನು ತರುವುದು ಒತ್ತಾಯವಲ್ಲವೇ? ಕೆಲಸಕ್ಕೆ ಸೇರಲು ಒತ್ತಾಯಿಸುವುದು ಮತ್ತು ಗುಲಾಮಗಿರಿಯತ್ತ ತಳ್ಳುವುದು’

'ನಿಮ್ಮ ಮಗು ಕಷ್ಟವನ್ನು ಎದುರಿಸುತ್ತಿರುವುದಕ್ಕೆ ಒಂದೇ ಕಾರಣವೆಂದರೆ, ನೀವು ಮಗುವಿಗೆ ಜನ್ಮಕೊಟ್ಟಿದ್ದು’

ಹಲವು ಆ್ಯಂಟಿ ನ್ಯಾಟಲಿಸ್ಟ್‌ ಕಾರ್ಯಕರ್ತರು ದೇಶದಲ್ಲಿ ಮಗುವಿಗೆ ಜನ್ಮ ನೀಡುವುದರ ವಿರುದ್ಧ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮತ್ತಷ್ಟು ಜನರ ಹುಟ್ಟಿಗೆ ಕಾರಣವಾಗುವುದರಿಂದ ಭೂಮಿಯ ಸಂಪನ್ಮೂಲಗಳ ಮೇಲೆ ಹೊರೆ ಮಾಡಿದಂತಾಗುತ್ತದೆ, ಪರಿಸರದ ಕಾರಣಗಳಿಂದಾಗಿ ಸಂತಾನೋತ್ಪತ್ತಿಯನ್ನು ನಿಲ್ಲಿಸುವಂತೆ ಅಭಿಯಾನ ನಡೆಸುತ್ತಿದ್ದಾರೆ.

’ನಾನು ಯಾರ ಮೇಲೆಯೂ ನಮ್ಮ ನಂಬಿಕೆಗಳನ್ನು ಹೇರಲು ಪ್ರಯತ್ನಿಸುತ್ತಿಲ್ಲ. ಆದರೆ, ಪ್ರಸ್ತುತ ಜಗತ್ತಿನಲ್ಲಿ ಮಗುವಿನ ಹುಟ್ಟಿಗೆ ಕಾರಣವಾಗುವುದು ಏಕೆ ಸರಿಯಾದುದಲ್ಲ ಎಂಬುದನ್ನು ಹೆಚ್ಚು ಜನರು ತಿಳಿಯಬೇಕಿದೆ’ ಎಂದು ಕಾರ್ಯಕರ್ತೆ ಪ್ರತಿಮಾ ನಾಯಕ್‌ ಪ್ರತಿಕ್ರಿಯಿಸಿದ್ದಾರೆ. ಅವರು ಚೈಲ್ಡ್‌ಫ್ರೀ ಇಂಡಿಯಾ ಫೇಸ್ ಬುಕ್‌ ಪುಟದ ಮೂಲಕ ’ಯಾಕಾಗಿ ಮಗುವಿಗೆ ಜನ್ಮ ನೀಡಿ ಸಂಕಷ್ಟದಲ್ಲಿ ದೂಡುವಿರಿ’ ಎಂದು ಅಭಿಯಾನ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.