ನವದೆಹಲಿ:ಉತ್ತರ ಪ್ರದೇಶದ ಉಸ್ತುವಾರಿಯನ್ನು ಪ್ರಿಯಾಂಕಾ ಗಾಂಧಿ ಅವರಿಗೆ ನೀಡಲಾಗಿದೆ. ಹಾಗಾಗಿ ಬಿಜೆಪಿಗೆ ಸ್ವಲ್ಪ ಭಯ ಹುಟ್ಟಿದೆ ಎಂದು ಅಮೇಥಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ ಹೇಳಿದ್ದಾರೆ.
ಬುಧವಾರ ಪ್ರಿಯಾಂಕಾ ಗಾಂಧಿ ಅವರನ್ನು ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ ರಾಹುಲ್ ಗಾಂಧಿ, ಉತ್ತರ ಪ್ರದೇಶದ ಪೂರ್ವ ಭಾಗದ ಉಸ್ತುವಾರಿಯನ್ನು ತಮ್ಮ ಸಹೋದರಿಗೆ ನೀಡಿದ್ದಾರೆ.
ಏತನ್ಮಧ್ಯೆ, ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಸ್ಪರ್ಧಿಸುತ್ತಿದ್ದಾರೆಯೇಎಂದು ಪತ್ರಕರ್ತರು ಪ್ರಶ್ನೆ ಕೇಳಿದಾಗ, ಅದು ಪ್ರಿಯಾಂಕಾ ಅವರಿಗೆ ಬಿಟ್ಟದ್ದು.ಅದು ಉತ್ತರ ಪ್ರದೇಶ, ಗುಜರಾತ್ ಅಥವಾ ಇನ್ನು ಯಾವುದೇ ರಾಜ್ಯವಾಗಿರಲಿ. ನಾವು ಇನ್ನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ ರಾಹುಲ್.
ಪ್ರಿಯಾಂಕಾ ಜತೆ ಕೆಲಸ ಮಾಡಲು ತಾನು ಉತ್ಸುಕನಾಗಿದ್ದೇನೆ ಎಂದು ಹೇಳಿದ ರಾಹುಲ್, ನನ್ನ ಸಹೋದರಿ ಶ್ರಮಜೀವಿ, ಜ್ಯೋತಿರಾದಿತ್ಯ ಕೂಡಾ ತುಂಬಾ ಉತ್ತಮ ನಾಯಕ ಎಂದಿದ್ದಾರೆ.
ಉತ್ತರ ಪ್ರದೇಶವನ್ನು ಬಿಜೆಪಿ ನಿರ್ನಾಮ ಮಾಡಿದೆ. ನಾವು ಇಲ್ಲಿನ ಜನರಿಗೆ ಹೊಸ ದಿಶೆ ತೋರಿಸಲಿದ್ದೇವೆ.ಈ ಎರಡು ನಾಯಕರ ನೇತೃತ್ವದಲ್ಲಿ ನಾವು ಉತ್ತರ ಪ್ರದೇಶವನ್ನು ನಂಬರ್ 1 ಮಾಡಲು ಬಯಸುತ್ತೇನೆ.
ಪ್ರಿಯಾಂಕಾ ಮತ್ತು ಜ್ಯೋತಿರಾದಿತ್ಯ ಅವರನ್ನು ಕೇವಲ ಎರಡು ತಿಂಗಳ ಮಟ್ಟಿಗೆ ನಾನು ಉತ್ತರ ಪ್ರದೇಶಕ್ಕೆ ಕಳುಹಿಸಿಲ್ಲ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ನ್ನುಮುನ್ನಡೆಸುವುದಕ್ಕಾಗಿ ಅವರನ್ನು ಅಲ್ಲಿಗೆ ಕಳುಹಿಸಿದ್ದೇನೆ. ಬಡವರ, ಯುವಜನರಮತ್ತು ರೈತರ ಪರವಾಗಿ ನಾವು ನಿಲ್ಲುತ್ತೇವೆ. ಉತ್ತರಪ್ರದೇಶ ಹೊಸ ಧೋರಣೆ, ಹೊಸ ಯೋಚನೆಗೆ ತೆರೆದುಕೊಳ್ಳಲಿದೆಎಂದಿದ್ದಾರೆ ರಾಹುಲ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.