ಕಣ್ಣೂರು: ಲೋಕಸಭಾ ಚುನಾವಣೆಯ ಕಾವು ಏರುತ್ತಿರುವ ಈ ಹೊತ್ತಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ರಾಜಕೀಯ ವಿಚಾರಗಳಿಂದ ಪರಸ್ಪರ ಸ್ನೇಹಸಂಬಂಧಗಳನ್ನು ಕಳೆದುಕೊಂಡವರು ಅದೆಷ್ಟೋ ಮಂದಿ ಇದ್ದಾರೆ. ಒಬ್ಬರ ರಾಜಕೀಯ ವಿಚಾರಗಳು ಇನ್ನೊಬ್ಬರಿಗೆ ಹಿಡಿಸದೇ ಇದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಪರಸ್ಪರ ಜಗಳ ಕೆಸರೆರಚಾಟ, ಟ್ರೋಲ್ ಆಗುತ್ತಿರುವ ಸಂದರ್ಭದಲ್ಲಿ ಗೆಳೆತನಕ್ಕೆ ರಾಜಕೀಯದ ಹಂಗಿಲ್ಲ ಎಂದು ಸಾರುವ ಚಿತ್ರವೊಂದು ವೈರಲ್ ಆಗಿದೆ.
ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮ ಮುಕ್ತಾಯದ ದಿನ ಕ್ಲಿಕ್ಕಿಸಿದ ಫೋಟೊ ಇದಾಗಿದ್ದು, ಫೋಟೊ ಕ್ಲಿಕ್ಕಿಸಿದವರು ಯಾರು ಎಂಬುದು ತಿಳಿದಿಲ್ಲ.
ಬಿಜೆಪಿ, ಕಾಂಗ್ರೆಸ್ ಮತ್ತು ಸಿಪಿಎಂ ಧ್ವಜಗಳನ್ನು ಹಿಡಿದಿರುವ ಯುವಕರು ಜತೆಯಾಗಿ ಕಾರೊಂದರಲ್ಲಿ ಸಂಚರಿಸುತ್ತಿರುವ ಫೋಟೊ ಇದಾಗಿದ್ದು, ಸಾಮಾಜಿಕ ಮಾಧ್ಯಮಗಳು ಈ ಗೆಳೆತನವನ್ನು ಶ್ಲಾಘಿಸಿವೆ.
ಈ ಯುವಕರನ್ನು ಮನೋರಮಾ ಟೀವಿ ಪ್ರತಿನಿಧಿ ಮಾತನಾಡಿಸಿದ್ದು, ವಿಡಿಯೊ ಇಲ್ಲಿದೆ.
ಕಣ್ಣೂರು ಜಿಲ್ಲೆಯಭರ್ನಾಶ್ಶೇರಿಯಿಂದ ಬಂದ ಯುವಕರ ತಂಡ ಇದಾಗಿದ್ದು, ಇಲ್ಲಿ ಮೂರು ಪಕ್ಷದ ಬೆಂಬಲಿಗರು ಇದ್ದಾರೆ. ಪಕ್ಷಗಳು ಬೇರೆ ಬೇರೆ ಆಗಿದ್ದರೂ ನಮ್ಮ ಗೆಳೆತನಕ್ಕೆ ಇದು ಯಾವುದೂ ಅಡ್ಡಿ ಬಂದಿಲ್ಲ ಎಂಬುದು ಈ ಯುವಕರ ಅಭಿಪ್ರಾಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.