ಭೋಪಾಲ್: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ₹ 1.11 ಲಕ್ಷ ದೇಣಿಗೆ ನೀಡಿದ್ದಾರೆ.
ಈ ಮೂಲಕ ದಿಗ್ವಿಜಯ್ ಸಿಂಗ್, ರಾಮಮಂದಿರಕ್ಕೆ ದೇಣಿಗೆ ಸಲ್ಲಿಸಿದ ಮೊದಲ ಕಾಂಗ್ರೆಸ್ಸಿಗರಾಗಿದ್ದು, ಪ್ರಧಾನಿಗೆ ಚೆಕ್ ಕಳುಹಿಸಿಕೊಟ್ಟಿದ್ದಾರೆ. ದೇಣಿಗೆಯ ಚೆಕ್ ಜೊತೆಗೆ ಎರಡು ಪುಟಗಳ ಪತ್ರ ಬರೆದಿರುವ ಅವರು, ಈ ಹಿಂದೆ ರಾಮ ಮಂದಿರ ನಿರ್ಮಾಣಕ್ಕೆ ವಿಎಚ್ಪಿ ಸಂಗ್ರಹಿಸಿದ ದೇಣಿಗೆಯ ವಿವರವಾದ ಹೇಳಿಕೆ ಬಿಡುಗಡೆ ಮಾಡಲು ಸೂಚಿಸುವಂತೆ ಪ್ರಧಾನಿಗೆ ಮನವಿ ಮಾಡಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
"ಲಾಠಿ ಮತ್ತು ಕತ್ತಿಗಳನ್ನು ಹಿಡಿದು ಸಮುದಾಯವನ್ನು ಪ್ರಚೋದಿಸಲು ಘೋಷಣೆಗಳನ್ನು ಕೂಗುವುದು ಯಾವುದೇ ಧಾರ್ಮಿಕ ಸಮಾರಂಭದ ಭಾಗವಾಗಲು ಸಾಧ್ಯವಿಲ್ಲ. ಇಂತಹ ಬೆಳವಣಿಗೆಗಳು ಹಿಂದೂ ಧರ್ಮದ ಭಾಗವಾಗಬಾರದು," ಎಂದು ಸಿಂಗ್ ಪತ್ರದಲ್ಲಿ ಬರೆದಿದ್ದಾರೆ.
"ಇಂತಹ ಬೆಳವಣಿಗೆಗಳಿಂದಾಗಿ, ಮಧ್ಯಪ್ರದೇಶದಲ್ಲಿ ಈಗಾಗಲೇ ಮೂರು ಅಹಿತಕರ ಘಟನೆಗಳು ನಡೆದಿವೆ, ಇದು ಸಮಾಜದಲ್ಲಿನ ಸಾಮಾಜಿಕ ಸಾಮರಸ್ಯವನ್ನು ಹಾಳು ಮಾಡಿದೆ" ಎಂದು ಉಜ್ಜಯಿನಿ, ಇಂದೋರ್ ಮತ್ತು ಮಾಂಡ್ಸೌರ್ ಜಿಲ್ಲೆಗಳಲ್ಲಿ ನಡೆದ ಘರ್ಷಣೆಯನ್ನು ಉಲ್ಲೇಖಿಸಿದ್ದಾರೆ.
"ರಾಮಮಂದಿರ ನಿರ್ಮಿಸುವ ವಿಚಾರದಲ್ಲಿ ಇತರೆ ಧಾರ್ಮಿಕ ಸಮುದಾಯಗಳಿಗೆ ಯಾವುದೇ ವಿರೋಧವಿಲ್ಲ’ಎಂಬುದು ನಿಮಗೆ ತಿಳಿಸಿದೆ. ದೇಶದ ಪ್ರಧಾನಮಂತ್ರಿಯಾಗಿ ನೀವು, ಶಸ್ತ್ರಾಸ್ತ್ರಗಳನ್ನು ಹಿಡಿದ ಜನರು ಇತರ ಸಮುದಾಯಗಳನ್ನು ಪ್ರಚೋದಿಸುವ ಮೂಲಕ ದೇಣಿಗೆ ಸಂಗ್ರಹಣೆ ಮೆರವಣಿಗೆಗಳನ್ನು ನಡೆಸುವುದನ್ನು ನಿಲ್ಲಿಸುವಂತೆ ರಾಜ್ಯಗಳಿಗೆ ನಿರ್ದೇಶನ ನೀಡಿ "ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.