ತೂತುಕುಡಿ(ತಮಿಳುನಾಡು): ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಂಪತ್ತಿನ ಹಂಚಿಕೆಯಲ್ಲಿ ಅಸಮಾನತೆ ಹೆಚ್ಚಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.
ಚುನಾವಣಾ ಪ್ರಚಾರದ ನಿಮಿತ್ತ ದಕ್ಷಿಣ ತಮಿಳುನಾಡಿನಲ್ಲಿ ಪ್ರವಾಸ ಕೈಗೊಂಡಿರುವ ರಾಹುಲ್ ಗಾಂಧಿ, ಕಾಂಗ್ರೆಸ್ಸಿನ ಉನ್ನತ ಮುಖಂಡರು, ಉಪ್ಪು ತಯಾರಕ ಕಾರ್ಮಿಕರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದರು. ಇದೇ ವೇಳೆ ಉಪ್ಪು ತಯಾರಕರು, ತಾವು ಎದುರಿಸುತ್ತಿರುವ ಆರ್ಥಿಕ, ಆರೋಗ್ಯ ಹಾಗೂ ಇನ್ನಿತರ ಸಮಸ್ಯೆಗಳನ್ನು ಹೇಳಿಕೊಂಡರು.
ವರ್ಷದಲ್ಲಿ ನಾಲ್ಕು ತಿಂಗಳ ಕಾಲ ಉಪ್ಪು ತಯಾರಕರಿಗೆ ದುಡಿಮೆ ಇರುವುದಿಲ್ಲ. ಈ ಅವಧಿಯಲ್ಲಿ ಆರ್ಥಿಕ ನೆರವು ನೀಡುವಂತೆ ಉಪ್ಪು ತಯಾರಿಕಾ ಘಟಕದ ಮಹಿಳಾ ಕಾರ್ಮಿಕರು ಸರ್ಕಾರವನ್ನು ಕೇಳಿದ್ದರು. ಈ ವಿಷಯವನ್ನು ಸಂವಾದದ ವೇಳೆ ಕಾರ್ಮಿಕರು ಹೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ‘ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಈ ಸಮಸ್ಯೆಗೆ ಪರಿಹಾರವಾಗಿ ಒಂದಷ್ಟು ಯೋಜನೆಗಳನ್ನು ರೂಪಿಸಲಾಗಿತ್ತು‘ ಎಂದು ನೆನಪಿಸಿಕೊಂಡರು.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕೆಲವು ಜನರು ಶ್ರೀಮಂತರಾಗುತ್ತಿದ್ದಾರೆ. ಅನೇಕ ಜನರು ಬಡವರಾಗುತ್ತಿದ್ದಾರೆ. ಇತ್ತೀಚೆಗೆ ಈ ಪ್ರಕ್ರಿಯೆ ಬಹಳ ಬಲಗೊಳ್ಳುತ್ತಿದೆ ಎಂದು ರಾಹುಲ್ ಆರೋಪಿಸಿದರು.
ಕೆಲಸವಿಲ್ಲದ ಅವಧಿಗೆ ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡುವ ಸಮಸ್ಯೆಯನ್ನು ಪಕ್ಷದ ಕಲ್ಪನೆಯು ನಿಭಾಯಿಸ ಬೇಕಾಗಿತ್ತು ‘ಕನಿಷ್ಠ ಆದಾಯದ ಪರಿಕಲ್ಪನೆ‘, ದೇಶದ ಪ್ರತಿಯೊಬ್ಬ ಬಡ ಕುಟುಂಬಕ್ಕೂ ನ್ಯಾಯ ಯೋಜನೆ ಎಂದು ಅವರು ಹೇಳಿದರು. .
‘ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ, ಉದ್ಯೋಗ ಸಿಗದ ಕಾರ್ಮಿಕರಿಗೆ ‘ಕನಿಷ್ಠ ಆದಾಯ ನೀಡುವ ಪರಿಕಲ್ಪನೆ‘ ಜಾರಿಯಲ್ಲಿತ್ತು. ಪ್ರತಿ ಬಡ ಕುಟುಂಬಕ್ಕೂ, ಕನಿಷ್ಠ ಆರ್ಥಿಕ ನೆರವು ನೀಡುವ ‘ನ್ಯಾಯ್ ಯೋಜನೆ‘ ಜಾರಿಯಲ್ಲಿತ್ತು‘ ಎಂದು ರಾಹುಲ್ ಹೇಳಿದರು. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ‘ನ್ಯಾಯ್ ಯೋಜನೆ‘ಯನ್ನು ಪುನಃ ಜಾರಿಗೆ ತರಲಾಗುತ್ತದೆ ಎಂದು ಅವರು ಭರವಸೆ ನೀಡಿದರು.
ಇದೇ ವೇಳೆ ಮಹಿಳಾ ಕಾರ್ಮಿಕರು ‘ಮದ್ಯ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ನಾವು ದುಡಿದ ಹಣವನ್ನೆಲ್ಲ ಕುಡಿತಕ್ಕೆ ಬಳಸುತ್ತಿದ್ದಾರೆ. ಮದ್ಯಪಾನ ನಿಷೇಧ ಜಾರಿ ಮಾಡುವಂತೆ‘ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.