ನವದೆಹಲಿ (ಪಿಟಿಐ); ರಾಹುಲ್ ಗಾಂಧಿ ಅವರಿಗೆ ಶಿಕ್ಷೆ ವಿಧಿಸಿರುವುದು ಮತ್ತು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದು ಕಾನೂನಿನಲ್ಲಿರುವ ನ್ಯೂನತೆ ತೋರಿಸುತ್ತದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ಬುಧವಾರ ಹೇಳಿದ್ದಾರೆ.
ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಈ ನ್ಯೂನತೆಯು ಭಾರತೀಯ ನ್ಯಾಯಾಂಗ ವ್ಯವಸ್ಥೆಗೂ ಅಗ್ನಿ ಪರೀಕ್ಷೆ ಆಗಿದ್ದು, ಅದನ್ನು ಸರಿಪಡಿಸುವ ಭರವಸೆ ಇದೆ ಎಂದು ಹೇಳಿದರು.
ಸೂರತ್ ನ್ಯಾಯಾಲಯವು ಮಾನಹಾನಿ ಪ್ರಕರಣದಲ್ಲಿ ರಾಹುಲ್ಗೆ ಎರಡು ವರ್ಷ ಶಿಕ್ಷೆ ವಿಧಿಸಿರುವುದು ಹಾಗೂ ಅವರ ಅನರ್ಹತೆ ಬಗ್ಗೆ ಸಾಕಷ್ಟು ಚರ್ಚೆಗಳು ಆಗಿವೆ. ಆದರೆ, ಕಾನೂನು ಮತ್ತು ಸಂವಿಧಾನದಲ್ಲಿಯೇ ನ್ಯೂನತೆ ಇದೆ ಎಂದು ಪುನರುಚ್ಚರಿಸಿದರು.
ಇದೇ ಮಾನದಂಡ ಅನ್ವಯಿಸಿದ್ದರೆ, ಬಹುಶಃ ಭಾರತೀಯ ಸಂಸತ್ತು ಟೊಳ್ಳಾಗಿರುತ್ತಿತ್ತು. ರಾಜಕೀಯ ಪಕ್ಷಗಳ ಪ್ರಮುಖ ನಾಯಕರು ದಶಕಗಳಿಂದ ಸಂಸತ್ನಿಂದ ಹೊರಗುಳಿಯುತ್ತಿದ್ದರು. ಆದರೆ ಹಾಗಾಗಲಿಲ್ಲ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.