ಕೋಯಿಕ್ಕೋಡ್ (ಕೇರಳ): ಸರ್ಕಾರಿ ಆಸ್ಪತ್ರೆಯ ವೈದ್ಯನೊಬ್ಬ, 4 ವರ್ಷದ ಹೆಣ್ಣು ಮಗುವಿನ ಕೈಗೆ ಶಸ್ತ್ರಚಿಕಿತ್ಸೆ ಮಾಡುವ ಬದಲು ಮಗುವಿನ ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿರುವ ವಿಚಿತ್ರ ಘಟನೆ ಕೇರಳದಲ್ಲಿ ನಡೆದಿದೆ. ಇಂಥದ್ದೊಂದು ಅಚಾತುರ್ಯ ಮಾಡಿರುವ ನಿರ್ಲಕ್ಷ್ಯ ವೈದ್ಯನನ್ನು ಅಮಾನತುಗೊಳಿಸಲಾಗಿದೆ.
ಆಗಿದ್ದೇನು?: ಮಗುವಿನ ಒಂದು ಕೈಯಲ್ಲಿ 6 ಬೆರಳುಗಳಿವೆ. ಈ ಆರನೇ ಬೆರಳನ್ನು ತೆಗೆಸಲು ಮೆಡಿಕಲ್ ಕಾಲೇಜು ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಆರೈಕೆ ಕೇಂದ್ರದಲ್ಲಿ ಶಸ್ತ್ರಚಿಕಿತ್ಸೆಗೆ ನಿರ್ಧರಿಸಲಾಗಿತ್ತು. ಶಸ್ತ್ರಚಿಕಿತ್ಸೆಗೆ ನಿಗದಿಯಾಗಿದ್ದ ವೈದ್ಯ ಅಸೋಸಿಯೇಟ್ ಪ್ರೊಫೆಸರ್ ಡಾ. ಬೆಜಾನ್ ಜಾನ್ಸನ್ ಅವರು ಮಗುವಿನ ನಾಲಗೆಗೆ ಶಸ್ತ್ರಚಿಕಿತ್ಸೆಗೆ ಮಾಡಿಬಿಟ್ಟಿದ್ದಾರೆ.
ಮಗುವಿನ ಬಾಯಿಯಲ್ಲಿ ಹತ್ತಿಯನ್ನು ತುಂಬಿರುವುದನ್ನು ಗಮನಿಸಿ ನೋಡಿದಾಗ ಕೈ ಬದಲಾಗಿ ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿರುವ ದೋಷವು ಬೆಳಕಿಗೆ ಬಂದಿದೆ ಎಂದು ಮಗುವಿನ ಪೋಷಕರು ತಿಳಿಸಿದ್ದಾರೆ. ಸದ್ಯ ಮಗುವಿನ ನಾಲಗೆಗೆ ಯಾವುದೇ ತೊಂದರೆ ಇಲ್ಲ.
ಪ್ರಕರಣದಲ್ಲಿ ವೈದ್ಯ ಜಾನ್ಸನ್ ಅವರನ್ನು ಅಮಾನತುಗೊಳಿಸಲಾಗಿದೆ.
ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಘಟನೆ ಕುರಿತು ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಮಗುವಿನ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಒಂದೇ ದಿನ ಎರಡು ಶಸ್ತ್ರಚಿಕಿತ್ಸೆ ಇದ್ದದ್ದೇ ಕಾರಣ
ಒಂದೇ ದಿನಾಂಕದಂದು ಇಬ್ಬರು ಮಕ್ಕಳ ಶಸ್ತ್ರಚಿಕಿತ್ಸೆಯನ್ನು ನಿಗದಿಪಡಿಸಲಾಗಿತ್ತು. ಈ ಪೈಕಿ ಒಂದು ಮಗುವಿಗೆ ನಾಲಗೆಯ ಮತ್ತು ಇನ್ನೊಂದು ಮಗುವಿಗೆ ಬೆರಳಿಗೆ ಶಸ್ತ್ರಚಿಕಿತ್ಸೆ ನಡೆಸಬೇಕಿತ್ತು. ಹೀಗಾಗಿ ಗೊಂದಲದಿಂದ ಘಟನೆ ನಡೆದಿದೆ ಎಂದು ಆಸ್ಪತ್ರೆ ತಿಳಿಸಿದೆ ಎಂದು ಮಗುವಿನ ಪೋಷಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.