ADVERTISEMENT

ಕೃಷಿ ಕಾಯ್ದೆ: ಕೇಂದ್ರವು ಪ್ರತಿಷ್ಠೆಯ ವಿಷಯವಾಗಿ ಪರಿಗಣಿಸಬಾರದು– ಸಚಿನ್‌ ಪೈಲಟ್‌

ಪಿಟಿಐ
Published 11 ಫೆಬ್ರುವರಿ 2021, 11:28 IST
Last Updated 11 ಫೆಬ್ರುವರಿ 2021, 11:28 IST
ಸಚಿನ್‌ ಪೈಲಟ್‌
ಸಚಿನ್‌ ಪೈಲಟ್‌   

ನವದೆಹಲಿ: ‘ಕೇಂದ್ರ ಸರ್ಕಾರವು ನೂತನ ಕೃಷಿ ಕಾನೂನುಗಳನ್ನು ‘ಪ್ರತಿಷ್ಠೆಯ ವಿಷಯ’ ಎಂದು ಪರಿಗಣಿಸದೆ ತನ್ನ ಹಟವನ್ನು ಬಿಟ್ಟು, ಆದಷ್ಟು ಬೇಗ ರದ್ದುಗೊಳಿಸಬೇಕು’ ಎಂದು ಕಾಂಗ್ರೆಸ್ ನಾಯಕ ಸಚಿನ್‌ ಪೈಲಟ್‌ ಅವರು ಒತ್ತಾಯಿಸಿದರು.

‘ಬಿಜೆಪಿಗೆ ತನ್ನ ಮೈತ್ರಿ ಪಕ್ಷಗಳಾದ ಅಕಾಲಿದಳ ಮತ್ತು ಆರ್‌ಎಲ್‌ಪಿಯನ್ನು ಕೃಷಿ ಕಾನೂನು ವಿಷಯದಲ್ಲಿ ಮನವೊಲಿಸಲು ಸಾಧ್ಯವಾಗಿಲ್ಲ. ಹೀಗಿರುವಾಗ ಈ ಕಾನೂನುಗಳನ್ನು ರೈತರು ಒಪ್ಪಿಕೊಳ್ಳಬೇಕು ಎಂದು ಬಿಜೆಪಿ ಹೇಗೆ ನಿರೀಕ್ಷಿಸಲು ಸಾಧ್ಯ?’ ಎಂದು ಅವರು ಪ್ರಶ್ನಿಸಿದ್ದಾರೆ.

‘ಕೇಂದ್ರ ಸರ್ಕಾರ ಈ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು. ರೈತರು ಮತ್ತು ರಾಜ್ಯಗಳೊಂದಿಗೆ ಚರ್ಚಿಸಿ ಹೊಸ ಕಾನೂನುಗಳನ್ನು ತರಬೇಕು. ಸರ್ಕಾರ ತರುವ ಕಾನೂನುಗಳಲ್ಲಿ ರೈತರೂ ಭಾಗಿಯಾಗಬೇಕು. ಅದನ್ನು ಅವರ ಮೇಲೆ ಬಲವಂತವಾಗಿ ಹೇರಬಾರದು’ ಎಂದು ಅವರು ಹೇಳಿದರು.

ADVERTISEMENT

ಸಂದರ್ಶನವೊಂದರಲ್ಲಿ ಮಾತನಾಡಿದ ಸಚಿನ್‌ ಪೈಲಟ್,‘ ಕಾಂಗ್ರೆಸ್‌ ತಮ್ಮ ಮಾತುಗಳಿಂದ ಯೂ–ಟರ್ನ್‌ ತೆಗೆದುಕೊಂಡಿದೆ ಎಂದು ಬಿಜೆಪಿ ದೂರಿದೆ. ಆದರೆ ಬಿಜೆಪಿಯೇ ‘ಯೂ–ಟರ್ನ್‌’ಗೆ ಹೆಸರುವಾಸಿಯಾಗಿದೆ’ ಎಂದು ಅವರು ವಾಗ್ದಾಳಿ ನಡೆಸಿದರು.

‘ಬಿಜೆಪಿಯು ಆಧಾರ್‌ಕಾರ್ಡ್‌, ಜಿಎಸ್‌ಟಿ, ನರೇಗಾ, ಎಫ್‌ಡಿಐ ಸೇರಿದಂತೆ ಹಲವು ವಿಷಯಗಳಲ್ಲಿ ಯೂ–ಟರ್ನ್‌ ತೆಗೆದುಕೊಂಡಿದೆ. ನಾವು ಹೊಸ ಬಂಡವಾಳ, ತಂತ್ರಜ್ಞಾನ, ಮಂಡಿಗಳು ಮತ್ತು ಉದಾರೀಕರಣ ನೀತಿ ಬೇಕು ಎಂದು‌ ಹೇಳಿದ್ದೆವು. ರೈತರ ಹಿತಾಕ್ತಿಗಳ ವಿರುದ್ಧ ಕಾನೂನು ತರುತ್ತೇವೆ ಎಂದು ಈವರೆಗೂ ಹೇಳಿಲ್ಲ’ ಎಂದು ಅವರು ತಿಳಿಸಿದರು.

‘ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂಬುದು ರೈತರ ಬೇಡಿಕೆಯಾಗಿದೆ. ರೈತರ ಈ ಬೇಡಿಕೆಯನ್ನು ಕಾಂಗ್ರೆಸ್‌ ಬೆಂಬಲಿಸುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.