ADVERTISEMENT

ನಮ್ಮ ರಾಷ್ಟ್ರೀಯತೆ ಬಗ್ಗೆ ಪ್ರಮಾಣಪತ್ರ ಪಡೆಯುವ ಅಗತ್ಯವಿಲ್ಲ: ಸಂಜಯ್ ರಾವುತ್

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 14:21 IST
Last Updated 11 ಡಿಸೆಂಬರ್ 2019, 14:21 IST
ಸಂಜಯ್ ರಾವುತ್
ಸಂಜಯ್ ರಾವುತ್   

ನವದೆಹಲಿ: ನಮ್ಮ ಪಕ್ಷವು ರಾಷ್ಟ್ರೀಯತೆ ಅಥವಾ ಹಿಂದುತ್ವದ ಸಿದ್ಧಾಂತದ ಬಗ್ಗೆ ಪ್ರಮಾಣ ಪತ್ರವನ್ನು ಪಡೆಯುವ ಅಗತ್ಯವಿಲ್ಲ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.

ಯಾರು ಪೌರತ್ವ ತಿದ್ದುಪಡಿ ಮಸೂದೆಗೆ ಬೆಂಬಲ ಸೂಚಿಸುವರೋ ಅವರು ದೇಶಭಕ್ತರು, ಯಾರು ಬೆಂಬಲ ನೀಡುವುದಿಲ್ಲವೋ ಅವರು ದೇಶ ವಿರೋಧಿಗಳು ಎನ್ನುವ ಮಾತುಗಳನ್ನು ನಿನ್ನೆಯಿಂದಲೂ ನಾನು ಕೇಳುತ್ತಿದ್ದೇನೆ. ನಮ್ಮ ರಾಷ್ಟ್ರೀಯತೆ ಅಥವಾ ಹಿಂದುತ್ವದ ಕುರಿತು ಯಾರಿಂದಲೂ ಪ್ರಮಾಣಪತ್ರವನ್ನುಪಡೆಯುವ ಅಗತ್ಯವಿಲ್ಲ ಎಂದು ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಕುರಿತಾದ ಚರ್ಚೆಯ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಬಲಿಷ್ಠ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರ ಭರವಸೆಯು ನಮಗಿದೆ. ಮಸೂದೆ ಅಂಗೀಕಾರವಾದ ನಂತರ ನುಸುಳುಕೋರರನ್ನು ಹೊರಗಟ್ಟುವಿರಾ? ಒಂದು ವೇಳೆ ನಿರಾಶ್ರಿತರಿಗೆ ನಾವು ಆಶ್ರಯ ನೀಡುತ್ತಿದ್ದರೆ ಅದರಲ್ಲಿ ಯಾವುದೇ ರಾಜಕೀಯ ಇರಬಾರದು. ಅವರು ಮತದಾನದ ಹಕ್ಕನ್ನು ಪಡೆಯುವರೇ ಎಂದು ಪ್ರಶ್ನಿಸಿದರು.

ADVERTISEMENT

ಇಂದು ಮಧ್ಯಾಹ್ನ 12ಗಂಟೆಗೆ ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ಮಸೂದೆಯು ಭಾರತದ ಮುಸ್ಲಿಂರ ವಿರುದ್ಧವಾಗಿದೆ ಎನ್ನುವ ತಪ್ಪು ಮಾಹಿತಿಯನ್ನು ರವಾನಿಸಲಾಗುತ್ತಿದೆ. ನರೇಂದ್ರ ಮೋದಿ ಸರ್ಕಾರವು ಸಂವಿಧಾನ ಬದ್ಧವಾಗಿಯೇ ಕಾರ್ಯನಿರ್ವಹಿಸುತ್ತಿದೆ ಮತ್ತು ಅಲ್ಪಸಂಖ್ಯಾತರಿಗೆ ಸಂಪೂರ್ಣ ರಕ್ಷಣೆ ನೀಡಲಾಗುತ್ತದೆ ಎಂದು ಹೇಳಿದ್ದರು.

ಈ ಮಸೂದೆಯು ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ಬರುವ ಅಲ್ಪಸಂಖ್ಯಾತ ಸಮುದಾಯದ ಜನರಿಗೆ ಭಾರತದ ಪೌರತ್ವವನ್ನು ಒದಗಿಸುತ್ತದೆ. ಡಿಸೆಂಬರ್ 31, 2014ಕ್ಕೂ ಮುಂಚೆ ಭಾರತಕ್ಕೆ ಬಂದಿರುವ ಹಿಂದೂ, ಕ್ರಿಶ್ಚಿಯನ್, ಸಿಖ್, ಬೌದ್ಧ ಮತ್ತು ಜೊರಾಶ್ಟ್ರಿಯನ್ ಸಮುದಾಯದ ನಿರಾಶ್ರಿತರಿಗೆ ಪೌರತ್ವ ಲಭ್ಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.