ನವದೆಹಲಿ/ರಾಂಚಿ:ಐಆರ್ಸಿಟಿಸಿ ಹೋಟೆಲ್ ಹಗರಣಕ್ಕೆ ಸಂಬಂಧಿಸಿದಂತೆ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಮತ್ತು ಅವರ ಪತ್ನಿ ರಾಬ್ಡಿದೇವಿ ಹಾಗೂ ಇತರರ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ಆರೋಪಪಟ್ಟಿ ಸಲ್ಲಿಸಿದೆ.
ಲಾಲು ಪ್ರಸಾದ್ ಮತ್ತು ಅವರ ಮಗ ತೇಜಸ್ವಿ ಯಾದವ್, ಪಕ್ಷದ ಮುಖಂಡ ಪಿ.ಸಿ. ಗುಪ್ತಾ ಮತ್ತು ಅವರ ಪತ್ನಿ ಸರಳಾ ಗುಪ್ತಾ, ಲಾರಾ ಪ್ರಾಜೆಕ್ಟ್ಸ್ ಕಂಪನಿ ಹಾಗೂ ಇತರ ಹತ್ತು ಜನರ ವಿರುದ್ಧ ಇದೇ ಮೊದಲ ಬಾರಿ ಇ.ಡಿ. ಆರೋಪ ಪಟ್ಟಿ ಸಲ್ಲಿಸಿದೆ.
ಲಾಲು ಪ್ರಸಾದ್ ಹಾಗೂ ಐಆರ್ಸಿಟಿಸಿಯ ಕೆಲವು ಅಧಿಕಾರಿಗಳು ಅಧಿಕಾರ ದುರುಪಯೋಗಪಡಿಸಿಕೊಂಡು, ಲಂಚ ಮತ್ತು ಇತರೆ ಲಾಭಗಳನ್ನು ಪಡೆದು ಪುರಿ ಮತ್ತು ರಾಂಚಿಯಲ್ಲಿ ಸುಜಾತಾ ಹೋಟೆಲ್ ಪ್ರೈ ಲಿಮಿಟೆಡ್ಗೆ ಹೋಟೆಲ್ಗಳನ್ನು ಹಂಚಿಕೆ ಮಾಡಿದ್ದಾರೆ ಎಂಬ ಅಂಶ ಆರೋಪ ಪಟ್ಟಿಯಲ್ಲಿದೆ. ಸಿಬಿಐ ದಾಖಲಿಸಿದ ಎಫ್ಐಆರ್ ಆಧಾರದಲ್ಲಿ ಇ.ಡಿ, ಲಾಲು ಪ್ರಸಾದ್ ಮತ್ತು ಕುಟುಂಬ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿತ್ತು. ಸಿಬಿಐ ಕೂಡ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಲಾಲು ಜಾಮೀನು ಅವಧಿ ವಿಸ್ತರಣೆಗೆ ಹೈಕೋರ್ಟ್ ನಕಾರ
ಮೇವು ಹಗರಣಕ್ಕೆ ಸಂಬಂಧಿಸಿದಂತೆ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಜಾಮೀನು ಅವಧಿ ವಿಸ್ತರಣೆ ಮನವಿಯನ್ನು ಜಾರ್ಖಂಡ್ ಹೈಕೋರ್ಟ್ ತಿರಸ್ಕರಿಸಿದ್ದು, ಆಗಸ್ಟ್ 30ರಂದು ಸಿಬಿಐ ನ್ಯಾಯಾಲಯದ ಎದುರು ಹಾಜರಾಗಲು ಸೂಚಿಸಿದೆ.
ಲಾಲು ಪ್ರಸಾದ್ ಅನಾರೋಗ್ಯ ಪೀಡಿತರಾಗಿದ್ದು, ಚಿಕಿತ್ಸೆ ಅಗತ್ಯವಿರುವುದರಿಂದ ಜಾಮೀನು ಅವಧಿಯನ್ನು ಮೂರು ತಿಂಗಳು ವಿಸ್ತರಿಸಬೇಕು ಎಂದು ಲಾಲು ಪರ ವಕೀಲರು ಕೋರಿದರು. ಆದರೆ, ಸಿಬಿಐ ಪರ ವಕೀಲ ರಾಜೀವ್ ಸಿನ್ಹಾ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಲಾಲು ಅವರ ಚಿಕಿತ್ಸೆಗಾಗಿ ಈಗಾಗಲೇ 12 ವಾರಗಳ ಕಾಲಾವಕಾಶ ನೀಡಲಾಗಿದೆ. ಮತ್ತೆ ಅವಧಿ ವಿಸ್ತರಿಸುವುದು ಸರಿಯಲ್ಲ ಎಂದರು.
ನ್ಯಾಯಾಲಯವು ಮೇ 11ರಂದು ಜಾಮೀನು ನೀಡಿದ್ದು, ವೈದ್ಯಕೀಯ ಅಂಶಗಳ ಆಧಾರದ ಮೇಲೆ ಆಗಸ್ಟ್ 14ರವರೆಗೆ ಅವಧಿ ವಿಸ್ತರಿಸಿತ್ತು.
*ಪ್ರಕರಣಕ್ಕೆ ಸಂಬಂಧಿಸಿದಂತೆ ₹44 ಕೋಟಿ ಮೌಲ್ಯದ ಆಸ್ತಿಯ ಮಾಹಿತಿಯನ್ನು ಜಾರಿ ನಿರ್ದೇಶನಾಲಯ ಆರೋಪ ಪಟ್ಟಿಯಲ್ಲಿ ಸೇರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.