ಶ್ರೀನಗರ: ಸಿಆರ್ಪಿಎಫ್ (ಕೇಂದ್ರ ಮೀಸಲು ಪೊಲೀಸ್ ಪಡೆ) ಚೆಕ್ಪೋಸ್ಟ್ಗೆ ವಾಹನ ನುಗ್ಗಿಸಿ ಪರಾರಿಯಾಗಲು ಅಪರಿಚಿತ ವ್ಯಕ್ತಿಯೊಬ್ಬ ಯತ್ನಿಸಿದ ಘಟನೆ ಜಮ್ಮು–ಕಾಶ್ಮೀರದ ಬುದ್ಗಾಂ ಜಿಲ್ಲೆಯ ಮಗಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಾಹನದ ಮೇಲೆ ಸಿಆರ್ಪಿಎಫ್ ಯೋಧರು ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಗಾಯಗೊಂಡಿದ್ದ ಚಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಬುಧವಾರ ಬೆಳಿಗ್ಗೆ 10.45ರ ವೇಳೆಗೆ ವಾಹನವೊಂದು ಚೆಕ್ಪೋಸ್ಟ್ ಬಳಿ ಬರುವುದನ್ನು ಗಮನಿಸಿದ ಸಿಬ್ಬಂದಿ ತಪಾಸಣೆಗಾಗಿ ನಿಲ್ಲುವಂತೆ ಸಂಕೇತ ನೀಡಿದ್ದಾರೆ. ಆದರೆ, ಚಾಲಕ ವಾಹನವನ್ನು ನುಗ್ಗಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಯೋಧರು ಕೆಲವು ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದಾಳಿಯಲ್ಲಿ ಗಾಯಗೊಂಡ ಚಾಲಕನನ್ನು ಮಹ್ರಾಜುದ್ದೀನ್ ಎಂದು ಗುರುತಿಸಲಾಗಿದ್ದು, ಈತ ಶ್ರೀನಗರದ ಮಖಾನಾ ಬೀರ್ವಾ ನಿವಾಸಿಯಾಗಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.