ADVERTISEMENT

‘ಭಾರತ ಲಕ್ಷ್ಮಿ’ಗೆ ಪ್ರಧಾನಿ ಮೋದಿ ಮನ್ನಣೆ

ಹಬ್ಬದ ಋತುವಿನಲ್ಲಿ ಎಲ್ಲರ ಬಾಳಲ್ಲೂ ಬೆಳಕು ಬರಲಿ: ‘ಮನದ ಮಾತಿ’ನಲ್ಲಿ ಆಶಯ

ಪಿಟಿಐ
Published 29 ಸೆಪ್ಟೆಂಬರ್ 2019, 20:00 IST
Last Updated 29 ಸೆಪ್ಟೆಂಬರ್ 2019, 20:00 IST
ಪ್ರಧಾನಿ ಮೋದಿ ಮನದ ಮಾತು
ಪ್ರಧಾನಿ ಮೋದಿ ಮನದ ಮಾತು   

ನವದೆಹಲಿ: ‘ಸಮಾಜದ ಒಳಿತಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರನ್ನು ಗೌರವಿಸುವ ಅಭಿಯಾನವೊಂದನ್ನು ದೀಪಾವಳಿಯ ಸಂದರ್ಭದಲ್ಲಿ ಆರಂಭಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕರೆ ನೀಡಿದರು.

ಆಕಾಶವಾಣಿಯ ತಿಂಗಳ ಕಾರ್ಯಕ್ರಮ ‘ಮನದ ಮಾತು’ ಮೂಲಕ ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಅವರು, ‘ಸಮೃದ್ಧಿಯನ್ನು ತರುತ್ತಾಳೆ ಎಂಬ ಕಾರಣಕ್ಕೆ ನಾವು ದೀಪಾವಳಿಯ ಸಂದರ್ಭದಲ್ಲಿ ಲಕ್ಷ್ಮಿಯನ್ನು ಸಂಭ್ರಮದಿಂದ ಮನೆಗೆ ಬರಮಾಡಿಕೊಳ್ಳುತ್ತೇವೆ, ಸಿಹಿತಿಂಡಿ ಹಂಚಿ ಸಂಭ್ರಮಿಸುತ್ತೇವೆ. ನಮ್ಮ ಸಂಸ್ಕೃತಿಯಲ್ಲಿ ಹೆಣ್ಣುಮಕ್ಕಳನ್ನು ಲಕ್ಷ್ಮಿ ಎಂದು ಪರಿಗಣಿಸಲಾಗುತ್ತದೆ. ಹೀಗಿರುವಾಗ ನಮ್ಮ ಗ್ರಾಮ, ಪಟ್ಟಣ ಅಥವಾ ನಗರದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ, ನಮ್ಮ ನಡುವೆ ಇದ್ದು ಸಾಧನೆ ಮಾಡಿದ ಹೆಣ್ಣು ಮಕ್ಕಳನ್ನು ಸನ್ಮಾನಿಸಬಾರದೇಕೆ ಎಂದರು.

‘ಸಮಾಜಕ್ಕೆ ಅಪೂರ್ವವಾದ ಸೇವೆ ಸಲ್ಲಿಸುತ್ತಿರುವ ಅನೇಕ ಹೆಣ್ಣುಮಕ್ಕಳು ನಮ್ಮ ಮಧ್ಯೆ ಇದ್ದಾರೆ. ಕೆಲವರು ಬಡ ಮಕ್ಕಳಿಗೆ ಉಚಿತವಾಗಿ ಪಾಠ ಹೇಳಿಕೊಡುತ್ತಾರೆ, ಕೆಲವರು ಆರೋಗ್ಯದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ವೈದ್ಯರು, ಎಂಜಿನಿಯರ್‌, ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂಥವರನ್ನು ಗುರುತಿಸಿ ಗೌರವಿಸುವ ಕೆಲಸ ದೇಶದಾದ್ಯಂತ ನಡೆಯಬೇಕು’ ಎಂದರು. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಮೋದಿ ಅವರು ‘BharatKiLakshmi’ ಹ್ಯಾಷ್‌ ಟ್ಯಾಗ್‌ ಮೂಲಕ ಇಂಥ ಮಹಿಳೆಯರ ಸಾಧನೆಯನ್ನು ಹಂಚಿಕೊಳ್ಳುವಂತೆಯೂ ಕರೆ ನೀಡಿದರು.

ADVERTISEMENT

ಮೋದಿ ಹೇಳಿದ್ದು

*ದೀಪದಡಿ ಕತ್ತಲೆ ಎಂಬಂತೆ, ದೀಪಾವಳಿ ಸಂದರ್ಭದಲ್ಲೂ ಹಲವರ ಮನೆಯಲ್ಲಿ ‘ಸಂತೋಷದ ಬೆಳಕು’ ಇರುವುದಿಲ್ಲ. ಈ ಬಾರಿ ಎಲ್ಲರ ಬಾಳಲ್ಲೂ ದೀಪಾವಳಿಯ ಬೆಳಕು ಮೂಡುವಂತೆ ಮಾಡೋಣ

* ಸ್ವಂತಕ್ಕೆ ಏನನ್ನೂ ಖರೀದಿಸಲಾಗದ ಸ್ಥಿತಿಯಲ್ಲಿರುವ ಬಡವರಿಗೆ ಸಿಹಿ ಹಂಚಿ, ಅವರಿಗೆ ಉಡುಗೆಗಳನ್ನು ಕೊಟ್ಟು ದೀಪಾವಳಿಯ ಸಂತಸ ಅವರಲ್ಲೂ ಮೂಡುವಂತೆ ಮಾಡೋಣ

* ಮನೆಯಲ್ಲಿ ಉಳಿದ ತಿಂಡಿ– ತಿನಿಸನ್ನು ಹಾಳುಮಾಡದೆ, ಅದರ ಅಗತ್ಯ ಇರುವವರಿಗೆ ಹಂಚೋಣ

* ಬಡವರಿಗೆ ತಿಂಡಿ ತಿನಿಸು, ಬಟ್ಟೆ–ಬರೆಗಳನ್ನು ವಿತರಿಸುವ ಸರ್ಕಾರೇತರ ಸಂಸ್ಥೆಗಳನ್ನು ಸಂಪರ್ಕಿಸಿ, ನಿಮ್ಮಲ್ಲಿರುವ ಹೆಚ್ಚುವರಿ ವಸ್ತುಗಳನ್ನು ಅವರಿಗೆ ಕೊಡಿ. ಆ ಮೂಲಕ ಅದು ಬಡವರ ಕೈಸೇರಲಿ

* ಯುವಕರು ಹೊಸ ಮಾದರಿಯ ಮಾದಕ ವ್ಯಸನಕ್ಕೆ ಬಲಿಯಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಇ–ಸಿಗರೇಟ್‌ ನಿಷೇಧಿಸುವ ತೀರ್ಮಾನ ಮಾಡಿದೆ

* ಇ–ಸಿಗರೇಟ್‌ನಲ್ಲಿರುವ ರಾಸಾಯನಿಕಗಳು ಅಪಾಯಕಾರಿಯಾದಂಥವು. ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುತ್ತವೆ

ನಿಮ್ಮ ನಮ್ರತೆಯೇ ನಮಗೆ ಸ್ಫೂರ್ತಿ

‘ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್‌ ಅವರಿಗೆ ಕರೆ ಮಾಡಿ ಜನ್ಮದಿನದ ಶುಭಾಶಯಗಳನ್ನು ಅಮೆರಿಕ ಪ್ರವಾಸಕ್ಕೂ ಮುನ್ನವೇ ಕೋರಿದ್ದೆ’ ಎಂದು ತಿಳಿಸಿದ ಮೋದಿ ಅವರು, ಇಬ್ಬರ ನಡುವೆ ನಡೆದ ಮಾತುಕತೆಯ ವಿವರಗಳನ್ನು ಬಿಚ್ಚಿಟ್ಟರು. ಶನಿವಾರ ಲತಾ ಅವರ ಜನ್ಮದಿನವಾಗಿತ್ತು. ಅವರು 90ನೇ ವರ್ಷಕ್ಕೆ ಕಾಲಿರಿಸಿದ್ದಾರೆ.

ಸಂಭಾಷಣೆಯ ವೇಳೆ ಲತಾ ಅವರನ್ನು ‘ಅಕ್ಕ’ ಎಂದು ಸಂಬೋಧಿಸಿದ್ದ ಮೋದಿ, ‘ನಿಮ್ಮ ನಮ್ರತೆಯೇ ನಮಗೆ ಸ್ಫೂರ್ತಿಯಾಗಿದೆ. ನಿಮ್ಮ ಜನ್ಮದಿನದ ದಿನ ನಾನು ವಿಮಾನದಲ್ಲಿರುತ್ತೇನೆ. ಅದಕ್ಕಾಗಿ ಅಮೆರಿಕಕ್ಕೆ ಹೋಗುವ ಮೊದಲೇ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ. ಕಳೆದ ಬಾರಿ ನಾನು ಮುಂಬೈಗೆ ಬಂದಿದ್ದಾಗ ನಿಮ್ಮನ್ನು ಭೇಟಿಮಾಡಬೇಕೆಂದಿದ್ದೆ. ಆದರೆ ಕೆಲಸದ ಒತ್ತಡದಿಂದ ಸಾಧ್ಯವಾಗಲಿಲ್ಲ. ಸದ್ಯದಲ್ಲೇ ಮತ್ತೆ ನಿಮ್ಮನ್ನು ಭೇಟಿಮಾಡಿ ನೀವು ತಯಾರಿಸಿದ ಗುಜರಾತಿ ಅಡುಗೆಯನ್ನು ಸವಿಯುತ್ತೇನೆ’ ಎಂದಿದ್ದಾರೆ.

ಇದಕ್ಕೆ ಪ್ರತಿಯಾಗಿ ಮೋದಿ ಅವರನ್ನು ಹೊಗಳಿದ ಲತಾ, ‘ನೀವು ಏನೆಂಬುದು ನಿಮಗೇ ತಿಳಿದಿಲ್ಲ. ನೀವು ಪ್ರಧಾನಿಯಾದ ನಂತರ ದೇಶದ ವರ್ಚಸ್ಸು ಹೆಚ್ಚಾಗಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ’ ಎಂದರು.

ಲತಾ ಮಂಗೇಶ್ಕರ್‌ಗೆ ಶುಭಾಶಯ

‘ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್‌ ಅವರಿಗೆ ಕರೆ ಮಾಡಿ ಜನ್ಮದಿನದ ಶುಭಾಶಯಗಳನ್ನು ಅಮೆರಿಕ ಪ್ರವಾಸಕ್ಕೂ ಮುನ್ನವೇ ಕೋರಿದ್ದೆ’ ಎಂದು ತಿಳಿಸಿದ ಮೋದಿ ಅವರು, ಇಬ್ಬರ ನಡುವೆ ನಡೆದ ಮಾತುಕತೆಯ ವಿವರಗಳನ್ನು ಬಿಚ್ಚಿಟ್ಟರು. ಶನಿವಾರ ಲತಾ ಅವರ ಜನ್ಮದಿನವಾಗಿತ್ತು. ಅವರು 90ನೇ ವರ್ಷಕ್ಕೆ ಕಾಲಿರಿಸಿದ್ದಾರೆ.

ಸಂಭಾಷಣೆಯ ವೇಳೆ ಲತಾ ಅವರನ್ನು ‘ಅಕ್ಕ’ ಎಂದು ಸಂಬೋಧಿಸಿದ್ದ ಮೋದಿ, ‘ನಿಮ್ಮ ನಮ್ರತೆಯೇ ನಮಗೆ ಸ್ಫೂರ್ತಿಯಾಗಿದೆ. ನಿಮ್ಮ ಜನ್ಮದಿನದ ದಿನ ನಾನು ವಿಮಾನದಲ್ಲಿರುತ್ತೇನೆ. ಅದಕ್ಕಾಗಿ ಅಮೆರಿಕಕ್ಕೆ ಹೋಗುವ ಮೊದಲೇ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ. ಕಳೆದ ಬಾರಿ ನಾನು ಮುಂಬೈಗೆ ಬಂದಿದ್ದಾಗ ನಿಮ್ಮನ್ನು ಭೇಟಿಮಾಡಬೇಕೆಂದಿದ್ದೆ. ಆದರೆ ಕೆಲಸದ ಒತ್ತಡದಿಂದ ಸಾಧ್ಯವಾಗಲಿಲ್ಲ. ಸದ್ಯದಲ್ಲೇ ಮತ್ತೆ ನಿಮ್ಮನ್ನು ಭೇಟಿಮಾಡಿ ನೀವು ತಯಾರಿಸಿದ ಗುಜರಾತಿ ಅಡುಗೆಯನ್ನು ಸವಿಯುತ್ತೇನೆ’ ಎಂದಿದ್ದಾರೆ.

ಇದಕ್ಕೆ ಪ್ರತಿಯಾಗಿ ಮೋದಿ ಅವರನ್ನು ಹೊಗಳಿದ ಲತಾ, ‘ನೀವು ಏನೆಂಬುದು ನಿಮಗೇ ತಿಳಿದಿಲ್ಲ. ನೀವು ಪ್ರಧಾನಿಯಾದ ನಂತರ ದೇಶದ ವರ್ಚಸ್ಸು ಹೆಚ್ಚಾಗಿದೆ. ಇದು ಹೆಮ್ಮೆಯ ವಿಚಾರವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.