ನವದೆಹಲಿ:ಚುನಾವಣೆ ನಡೆಯುವ ದಿನವೂ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಜಾಹೀರಾತುಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸುವುದನ್ನು ನಿಷೇಧಿಸಬೇಕು ಎಂಬ ಚುನಾವಣಾ ಆಯೋಗದ ಪ್ರಸ್ತಾವವನ್ನು ಸದ್ಯ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಸರ್ಕಾರದ ಮೂಲಗಳು ಹೇಳಿವೆ.
‘ಇಂತಹ ಪ್ರಸ್ತಾವ ಜಾರಿಗೆ ಬರಬೇಕು ಎಂದರೆ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರುವುದು ಅವಶ್ಯ. ಏನಿದ್ದರೂ ಮುಂದೆ ಅಧಿಕಾರಕ್ಕೆ ಬರುವ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆ ವೇಳೆ ಆಯೋಗದ ಪ್ರಸ್ತಾವವನ್ನು ಜಾರಿಗೊಳಿಸುವುದಿಲ್ಲ’ ಎಂದು ಮೂಲಗಳು ತಿಳಿಸಿವೆ.
ಚುನಾವಣಾ ನಿಯಮಗಳಲ್ಲಿ ತರಬಹುದಾದ ಬದಲಾವಣೆಗಳ ಕುರಿತಂತೆ ಶಿಫಾರಸು ಮಾಡಲು ಸಮಿತಿಯೊಂದನ್ನು ರಚಿಸಲಾಗಿದೆ. ಮತದಾನ ನಡೆಯುವ ದಿನವೂ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸುವುದನ್ನು ನಿಷೇಧಿಸುವಂತೆ ಈ ಸಮಿತಿ ಶಿಫಾರಸು ಮಾಡಿದೆ. ಪ್ರಸ್ತುತ ಇರುವ ನಿಯಮಗಳ ಪ್ರಕಾರ,ವಿದ್ಯುನ್ಮಾನ ಮಾಧ್ಯಮಗಳು ಮತದಾನ ಮುಗಿಯುವ 48 ಗಂಟೆಗೂ ಮೊದಲು ರಾಜಕೀಯ ಪಕ್ಷಗಳ ಜಾಹೀರಾತುಗಳನ್ನು ಪ್ರಸಾರ ಮಾಡುವ ಹಾಗಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.