ಮುಂಬೈ: ಭೂಗತ ಜಗತ್ತಿನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಚಿವ, ಎನ್ಸಿಪಿ ಮುಖಂಡ ನವಾಬ್ ಮಲಿಕ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಬುಧವಾರ ಬಂಧಿಸಿದೆ.
ಈ ಕುರಿತು ಸುದ್ದಿಸಂಸ್ಥೆ 'ಎಎನ್ಐ' ಟ್ವೀಟಿಸಿದೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಚಟುವಟಿಕೆಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ನವಾಬ್ ಮಲಿಕ್ ಅವರನ್ನು ಸತತ ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಜಾರಿ ನಿರ್ದೇಶನಾಲಯ ಬುಧವಾರ ಮಧ್ನಾಹ್ನ 3 ಗಂಟೆ ವೇಳೆಗೆ ಬಂಧಿಸಿದೆ.
ಇ.ಡಿ. ಹಲವು ಕಡೆಗಳಲ್ಲಿಶೋಧ ಕಾರ್ಯಾಚರಣೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಮಹಾ ವಿಕಾಸ್ ಆಘಾಡಿ (ಎಂವಿಎ) ಮೈತ್ರಿಕೂಟದ ಸಚಿವರು ಬಂಧನಕ್ಕೊಳಗಾಗಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನವನ್ನುಂಟು ಮಾಡಿದೆ.
ಇ.ಡಿ. ಕಚೇರಿಯಿಂದ ಪೊಲೀಸರು ಹಾಗೂ ಅಧಿಕಾರಿಗಳು ಕರೆದೊಯ್ಯುತ್ತಿದ್ದಾಗ ಪ್ರತಿಕ್ರಿಯಿಸಿರುವ ನವಾಬ್ ಮಲಿಕ್, 'ಸೋಲೊಪ್ಪಿಕೊಳ್ಳುವುದಿಲ್ಲ, ಹೋರಾಡಿ ಗೆಲ್ಲುತ್ತೇನೆ' ಎಂದು ಹೇಳಿದ್ದಾರೆ.
2021 ನವೆಂಬರ್ 2ರಂದು ಭ್ರಷ್ಟಾಚಾರ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರನ್ನು ಬಂಧಿಸಿದ್ದ ಬಳಿಕ ನವಾಬ್ ಮಲಿಕ್, ಇ.ಡಿ. ಬಲೆಗೆ ಬಿದ್ದಿರುವ ಎರಡನೇ ಪ್ರಮುಖ ಎನ್ಸಿಪಿ ನಾಯಕ ಎಂದೆನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.