ನವದೆಹಲಿ (ಪಿಟಿಐ): ಹಣಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ನ ಆಪ್ತರ ಹೆಸರಿನಲ್ಲಿರುವ ಮಹಾರಾಷ್ಟ್ರದ ಠಾಣೆ ಫ್ಲ್ಯಾಟ್ನ್ನು ಜಾರಿ ನಿರ್ದೇಶನಾಲಯದ (ಇ.ಡಿ)ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಹಣಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಮುಮ್ತಾಜ್ ಶೇಖ್ ಅವರ ಸ್ಥಿರ ಆಸ್ತಿಯಾದ 55 ಲಕ್ಷ ₹ ಮೌಲ್ಯದ ಫ್ಲ್ಯಾಟ್ನ್ನು ವಶ ಮಾಡಿಕೊಳ್ಳಲಾಗಿದೆ ಎಂದು ಇ.ಡಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸುಲಿಗೆ ಮಾಡಿದ ಫ್ಲ್ಯಾಟ್:ಸದ್ಯಕ್ಕೆ ಜಪ್ತಿ ಮಾಡಿರುವ ಫ್ಲ್ಯಾಟ್ ಠಾಣೆಯ ರಿಯಲ್ ಎಸ್ಟೇಟ್ ಉದ್ಯಮಿ ಸುರೇಶ್ ದೇವಿಚಂದ್ ಮೆಹ್ತಾ ಅವರಿಂದ ಸುಲಿಗೆ ಮಾಡಿದ್ದು ಎಂದು ಇ.ಡಿ ಆರೋಪಿಸಿದೆ.
‘ಮೆಹ್ತಾ ಅವರು ತಮ್ಮ ಪಾಲುದಾರರೊಂದಿಗೆ ಠಾಣೆಯಲ್ಲಿ ಕನ್ಸ್ಟ್ರಕ್ಷನ್ ವ್ಯವಹಾರವನ್ನ ನಡೆಸುತ್ತಿದ್ದರು. ಆರೋಪಿಗಳಾದ ಇಕ್ಬಾಲ್ ಕಸ್ಕರ್, ಮುಮ್ತಾಜ್ ಶೆಕ್ ಹಾಗೂ ಇಸ್ರಾರ್ ಅಲಿ ಜಾಮಿಲ್ ದಾವೂದ್ ಇಬ್ರಾಹಿಂನ ಆಪ್ತವರ್ಗಕ್ಕೆ ಸೇರಿದ್ದು, ಈ ಫ್ಲ್ಯಾಟ್ನ್ನು ಮೆಹ್ತಾ ಅವರಿಂದ ಸುಲಿಗೆ ಮಾಡಿ ಮುಮ್ತಾಜ್ ಹೆಸರಿಗೆ ವರ್ಗಾಯಿಸಲಾಗಿದೆ’ ಎಂದು ಇ.ಡಿ ಹೇಳಿದೆ.
‘ಇದಲ್ಲದೇ ಮೆಹ್ತಾ ಅವರನ್ನು ಬೆದರಿಸಿ 10 ಲಕ್ಷ ₹ ಗಳ ಮೌಲ್ಯಕ್ಕೆ 4 ಚೆಕ್ಗಳನ್ನು ಪಡೆದುಕೊಂಡಿದ್ದ ಆರೋಪಿಗಳು, ಖಾತೆಗಳಿಂದ ಹಣವನ್ನ ಡ್ರಾ ಮಾಡಿಕೊಂಡಿದ್ದಾರೆ. ಹಣ ಡ್ರಾ ಮಾಡಿಕೊಳ್ಳುವವರನ್ನು ಮುಚ್ಚಿಡಲು ಈ ಖಾತೆಗಳನ್ನು ಸೃಷ್ಟಿಸಿದ್ದು, ಕೇವಲ ಹಣ ಡ್ರಾ ಮಾಡಲು ಉಪಯೋಗಿಸಲಾಗಿದೆ’ ಎಂದು ಜಾರಿ ನಿರ್ದೇಶನಾಲಯ ಮಾಹಿತಿ ನೀಡಿದೆ.
ಸದ್ಯ ಇಕ್ಬಾಲ್ ಕಸ್ಕರ್ ನ್ಯಾಯಾಂಗ ಬಂಧನದಲ್ಲಿದ್ದು, ಈಗ ಜಾರಿ ನಿರ್ದೇಶನಾಲಯ ಕಸ್ಕರ್ ಮೇಲೆ ಹೊಸ ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.