ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು(ಇ.ಡಿ) ಮೊದಲ ದೋಷಾರೋಪ ಪಟ್ಟಿ ಸಲ್ಲಿಸಿದೆ. ಆರೋಪಿಗಳ ಪಟ್ಟಿಯಲ್ಲಿ ಮದ್ಯದ ಉದ್ಯಮಿ ಸಮೀರ್ ಮಹೇಂದ್ರು ಅವರನ್ನು ಹೆಸರಿಸಲಾಗಿದೆ.
ಇಂಡೋ ಸ್ಪಿರಿಟ್ ಪ್ರವರ್ತಕ ಮಹೇಂದ್ರು ಜೊತೆಗೆ ಇನ್ನು ಇಬ್ಬರನ್ನೂ ಆರೋಪಿಗಳೆಂದು ತನ್ನ 3,000 ಪುಟಗಳ ಚಾರ್ಜ್ಶೀಟ್ನಲ್ಲಿ ಇ.ಡಿ ಹೇಳಿದೆ. ಆರೋಪಿಗಳ ಹೇಳಿಕೆಗಳು, ದಾಳಿ ವಿವರಗಳು ಮುಂತಾದ ಮಾಹಿತಿಯನ್ನು ನೀಡಲಾಗಿದೆ. ಚಾರ್ಜ್ ಶೀಟ್ನಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) ವಿವಿಧ ಸೆಕ್ಷನ್ಗಳನ್ನು ಉಲ್ಲೇಖಿಸಲಾಗಿದೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ಅವರ ಶಿಫಾರಸಿನ ಮೇರೆಗೆ ದಾಖಲಾಗಿರುವ ಸಿಬಿಐ ಎಫ್ಐಆರ್ನ ನಂತರ ದಾಖಲಾದ ಈ ಪ್ರಕರಣದಲ್ಲಿ ಇದುವರೆಗೆ 169 ಶೋಧ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗಿದೆ ಎಂದು ಇ.ಡಿ. ಹೇಳಿದೆ.
ದೆಹಲಿ ಅಬಕಾರಿ ನೀತಿ ನಿರೂಪಣೆಯಲ್ಲಿ ಜಿಎನ್ಸಿಟಿಡಿ (ದೆಹಲಿಯ ರಾಷ್ಟ್ರೀಯ ರಾಜಧಾನಿ ಸರ್ಕಾರದ ತಿದ್ದುಪಡಿ ಕಾಯ್ದೆ) 1991, ಉದ್ಯಮಗಳ ವಹಿವಾಟು ಕಾಯ್ದೆ-1993, ದೆಹಲಿ ಅಬಕಾರಿ ಕಾಯಿದೆ-2009 ಮತ್ತು 2010ರ ದೆಹಲಿ ಅಬಕಾರಿ ನಿಯಮಗಳ ಕಾಯ್ದೆಯ ನಿಯಮಗಳ ಉಲ್ಲಂಘನೆ ಮೇಲ್ನೋಟಕ್ಕೆ ಕಂಡುಬಂದಿರುವ ಬಗ್ಗೆ ದೆಹಲಿ ಮುಖ್ಯ ಕಾರ್ಯದರ್ಶಿ ನೀಡಿದ್ದ ವರದಿಯ ಆಧಾರದ ಮೇಲೆ ಸಿಬಿಐ ತನಿಖೆಗೆ ಶಿಫಾರಸು ಮಾಡಲಾಗಿತ್ತು.
ಸೆಪ್ಟೆಂಬರ್ 27 ರಂದು ವಿಚಾರಣೆಯ ನಂತರ ಮಹಂದ್ರು ಅವರನ್ನು ಇ.ಡಿ ಬಂಧಿಸಿತ್ತು. ಪ್ರಕರಣದಲ್ಲಿ ಈವರೆಗೆ ಒಟ್ಟು ಐದು ಮಂದಿಯನ್ನು ಇಡಿ ಬಂಧಿಸಿದೆ.
ಸಿಬಿಐ ಶುಕ್ರವಾರ ಪ್ರಕರಣದಲ್ಲಿ ತನ್ನ ಮೊದಲ ಚಾರ್ಜ್ ಶೀಟ್ ಸಲ್ಲಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.