ನವದೆಹಲಿ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ಆಪ್ತ ಸಹಾಯಕ ವಿಭವ್ ಕುಮಾರ್ ಮನೆ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳು ಅವರ(ವಿಭವ್ ಕುಮಾರ್) ಕೊಠಡಿಯಲ್ಲಿ ಕುಳಿತುಕೊಂಡು ಕಾಲ ಕಳೆದಿದ್ದಾರೆ. ಯಾವುದೇ ಶೋಧ ನಡೆಸುವ ನಾಟಕವನ್ನೂ ಮಾಡಿಲ್ಲ ಎಂದು ಸಚಿವೆ ಆತಿಶಿ ಆರೋಪಿಸಿದ್ದಾರೆ.
ಅಧಿಕಾರಿಗಳು ಅವರ ಮನೆಯ ಯಾವುದೇ ಕೊಠಡಿಗಳಲ್ಲಿ ಶೋಧ ನಡೆಸಿಲ್ಲ ಮತ್ತು ದಾಖಲೆ ಪತ್ರಗಳಿಗಾಗಿ ಹುಡುಕಾಟ ನಡೆಸಿಲ್ಲ. ಅವರು ಯಾವ ಪ್ರಕರಣದಲ್ಲಿ ಶೋಧಕ್ಕೆ ಬಂದಿದ್ದೇವೆ ಎಂದೂ ವಿವರಿಸಿಲ್ಲ ಎಂಬುದಾಗಿ ಸಚಿವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಆತಿಶಿ ಹೇಳಿಕೆಗೆ ಇ.ಡಿ ಅಧಿಕಾರಿಗಳಿಂದ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ದೆಹಲಿ ಜಲಮಂಡಳಿಯ(ಡಿಜೆಬಿ) ಟೆಂಡರ್ ಹಂಚಿಕೆಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ದಾಳಿ ನಡೆದಿದೆ ಎಂದು ಮಂಗಳವಾರ ಇ.ಡಿ ಮೂಲಗಳು ತಿಳಿಸಿದ್ದವು.
‘ಇತಿಹಾಸದಲ್ಲಿ ಇ.ಡಿ ಇಂಥದ್ದೊಂದು ದಾಳಿ ಮಾಡಿರುವುದು ಇದೇ ಮೊದಲಿರಬಹುದು’ ಎಂದು ಆತಿಶಿ ವ್ಯಂಗ್ಯ ಮಾಡಿದ್ದಾರೆ.
ಜಾರಿ ನಿರ್ದೇಶನಾಲಯವು ಬಿಜೆಪಿ ನೇತೃತ್ವದ ಕೇಂದ್ರದ ಅಚ್ಚುಮೆಚ್ಚಿನ ಅಸ್ತ್ರವಾಗಿದ್ದು, 16 ಗಂಟೆಗಳ ಕಾಲ ಮುಖ್ಯಮಂತ್ರಿಗಳ ಪಿಎ ಮನೆ ಮತ್ತು 18 ಗಂಟೆಗಳ ಕಾಲ ರಾಜ್ಯಸಭಾ ಸದಸ್ಯ ಎನ್.ಡಿ. ಗುಪ್ತಾ ಮನೆಯಲ್ಲಿ ಶೋಧ ನಡೆಸಿದೆ ಎಂದು ಮಂಗಳವಾರ ಆತಿಶಿ ಆರೋಪಿಸಿದ್ದರು.
‘ದಾಳಿಗೆ ಬಂದಿದ್ದ ಇ.ಡಿ ಅಧಿಕಾರಿಗಳು ಯಾವುದೇ ಶೋಧ ನಡೆಸಿಲ್ಲ ಎಂಬುದನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಅವರಿಗೆ ಯಾವುದೇ ದಾಖಲೆ ಪತ್ರಗಳು ಸಿಕ್ಕಿಲ್ಲ. ಯಾವುದೇ ವಿಚಾರಣೆಯನ್ನೂ ನಡೆಸಿಲ್ಲ. ಅಲ್ಲದೆ, ಯಾವ ಪ್ರಕರಣ ಸಂಬಂಧ ದಾಳಿ ನಡೆಸುತ್ತಿದ್ದೇವೆ ಎಂಬುದನ್ನೂ ತಿಳಿಸಿಲ್ಲ’ ಎಂದು ಅತಿಶಿ ಹೇಳಿದ್ಧಾರೆ.
ಇ.ಡಿ ಅಧಿಕಾರಿಗಳು ತೋರಿಸಿದ ಪಂಚನಾಮೆ ದಾಖಲೆಗಳು ಎರಡು ಜಿಮೇಲ್ ಖಾತೆಗಳು ಮತ್ತು ವಿಭವ ಅವರ ಕುಟುಂಬಸ್ಥರ ಮೊಬೈಲ್ನಿಂದ ಪಡೆದುಕೊಂಡವುಗಳಾಗಿವೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.