
'ಐ–ಪ್ಯಾಕ್' ಕಚೇರಿ ಮೇಲೆ ಇ.ಡಿ. ನಡೆಸಿದ ದಾಳಿ ಖಂಡಿಸಿದ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಟಿಎಂಸಿ ನಡೆಸಿದ ಪ್ರತಿಭಟನಾ ಮೆರವಣಿಗೆ
ಪಿಟಿಐ ಚಿತ್ರ
ಕೋಲ್ಕತ್ತ: ಜಾರಿ ನಿರ್ದೇಶನಾಲಯದ (ಇ.ಡಿ) ದಾಳಿ ವೇಳೆ 'ಐ–ಪ್ಯಾಕ್' ಕಚೇರಿಗೆ ಭೇಟಿ ನೀಡಿದ್ದರ ಬಗ್ಗೆ ಮಾತನಾಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 'ನಾನು ಯಾವುದೇ ತಪ್ಪು ಮಾಡಿಲ್ಲ. ನಮ್ಮ ಪಕ್ಷದ ರಹಸ್ಯ ಮಾಹಿತಿಯನ್ನು ರಕ್ಷಿಸಿಕೊಳ್ಳುವ ಹಕ್ಕು ನಮಗೆ ಇದೆ' ಎಂದು ಹೇಳಿದ್ದಾರೆ.
ರಾಜಕೀಯ ಸಲಹಾ ಸಂಸ್ಥೆಯಾಗಿರುವ 'ಐ–ಪ್ಯಾಕ್' ಕಚೇರಿ ಹಾಗೂ ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಇ.ಡಿ. ಗುರುವಾರ ದಾಳಿ ನಡೆಸಿತ್ತು. ಆ ವೇಳೆ ಕಚೇರಿಗೆ ಭೇಟಿ ನೀಡಿದ್ದ ಮಮತಾ, ಪ್ರಮುಖ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಧನೆಗಳನ್ನು ತೆಗೆದುಹಾಕಿದ್ದರು.
ಇ.ಡಿ. ದಾಳಿ ಖಂಡಿಸಿ ಕೋಲ್ಕತ್ತದಲ್ಲಿ ಆಯೋಜಿಸಿರುವ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿರುವ ಅವರು, 'ಯಾರಾದರೂ ನಮ್ಮನ್ನು ಕೊಲ್ಲಲು ಬಂದರೆ, ಆತ್ಮರಕ್ಷಣೆ ಮಾಡಿಕೊಳ್ಳುವ ಹಕ್ಕು ನಮಗೆ ಇಲ್ಲವೇ?' ಎಂದು ಪ್ರಶ್ನಿಸಿದ್ದಾರೆ. 'ನಾನು ನಿನ್ನೆ ಮಾಡಿರುವುದು ತಪ್ಪಲ್ಲ. ನಮ್ಮ ಪಕ್ಷದ ಮಾಹಿತಿಯನ್ನು ಕದಿಯಲು ಅವರು ಪ್ರಯತ್ನಿಸಿದ್ದರು' ಎಂದು ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆಗೆ 2026ರಲ್ಲಿ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಟಿಎಂಸಿಯ ಕಾರ್ಯತಂತ್ರ ಕುರಿತಾದ ಮಾಹಿತಿಯನ್ನು ವಶಪಡಿಸಿಕೊಳ್ಳುವುದು ಇ.ಡಿ. ಗುರಿಯಾಗಿತ್ತು. 'ಐ–ಪ್ಯಾಕ್ ಮೇಲೆ ಗುರುವಾರ ನಡೆದ ದಾಳಿ ವೇಳೆ, ಇ.ಡಿ ಅಧಿಕಾರಗಿಳು ಪಕ್ಷದ ಕಾರ್ಯತಂತ್ರದ ಮಾಹಿತಿ ಕದಿಯಲು ಯತ್ನಿಸಿದ್ದರು. ಅದನ್ನು ನಾವು ಖಂಡಿಸುತ್ತೇವೆ' ಎಂದು ಗುಡುಗಿದ್ದಾರೆ.
ಟಿಎಂಸಿ ಮುಖ್ಯಸ್ಥೆಯೂ ಆಗಿರುವ ಮಮತಾ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ರಾಜಕೀಯ ಉದ್ದೇಶಗಳಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. 'ರಾಜಕೀಯವಾಗಿ ಯಾರಾದರೂ ನನ್ನನ್ನು ಸೆದೆಬಡಿಯಲು ಪ್ರಯತ್ನಿಸಿದರೆ, ಮತ್ತಷ್ಟು ಹುರುಪಿನಿಂದ ಪುಟಿದೇಳುತ್ತೇನೆ' ಎಂದು ಗುಡುಗಿದ್ದಾರೆ.
ಬಿಜೆಪಿಯು ಸಾಂವಿಧಾನಿಕ ಸಂಸ್ಥೆಗಳ ನೆರವಿನೊಂದಿಗೆ ಚುನಾವಣಾ ಅಕ್ರಮಗಳನ್ನೂ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. 'ಬಿಜೆಪಿಯು ಚುನಾವಣಾ ಆಯೋಗದ ಸಹಕಾರದೊಂದಿಗೆ ಮಹಾರಾಷ್ಟ್ರದಲ್ಲಿ ಜನಾದೇಶವನ್ನೇ ಕದಿಯಿತು. ಅದನ್ನು ಬಂಗಾಳದಲ್ಲಿಯೂ ಪುನರಾವರ್ತಿಸಲು ಬಯಸುತ್ತಿದೆ' ಎಂದು ಗಂಭೀರ ಆರೋಪ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.