ADVERTISEMENT

ಸಂಪಾದಕರ ಒಕ್ಕೂಟದ ‘ವೆಬಿನಾರ್‌‘ ಮೇಲೆ ಅಪರಿಚಿತರ ದಾಳಿ

ಅಶ್ಲೀಲ ಫೋಟೊ, ಮೆಸೇಜ್‌ ಪೋಸ್ಟ್ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಅಡ್ಡಿ

ಪಿಟಿಐ
Published 13 ಫೆಬ್ರುವರಿ 2021, 11:18 IST
Last Updated 13 ಫೆಬ್ರುವರಿ 2021, 11:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ನಕ್ಸಲ್ ಪ್ರದೇಶಗಳಲ್ಲಿ ವರದಿ ಮಾಡುವಾಗ ಎದುರಾಗುವ ಸವಾಲುಗಳ ಕುರಿತು ಭಾರತೀಯ ಸಂಪಾದಕರ ಒಕ್ಕೂಟ ಶನಿವಾರ ಆಯೋಜಿಸಿದ್ದ ವೆಬಿನಾರ್‌ ಮೇಲೆ ಅಪರಿಚಿತ ವ್ಯಕ್ತಿಗಳು ದಾಳಿ ಮಾಡಿ, ಕಾರ್ಯಕ್ರಮಕ್ಕೆ ಅಡ್ಡಿ ಉಂಟು ಮಾಡಿದ್ದಾರೆ ಎಂದು ಸಂಪಾದಕರ ಒಕ್ಕೂಟ ಆರೋಪಿಸಿದೆ.

‘ವೆಬಿನಾರ್ ಆರಂಭವಾದ ಕೆಲವೇ ನಿಮಿಷಗಳಲ್ಲಿ, ಆನ್‌ಲೈನ್‌ಲ್ಲಿ ಅಪರಿಚಿತ ವ್ಯಕ್ತಿಗಳು ಕೆಟ್ಟ ಕೆಟ್ಟ ಹಾಡಿನ ವಿಡಿಯೊಗಳನ್ನು ಪೋಸ್ಟ್‌ ಮಾಡಲು ಆರಂಭಿಸಿದರು. ಈ ಮೂಲಕ ವೆಬಿನಾರ್ ಮೇಲೆ ದಾಳಿ ಮಾಡಿ, ಅಡ್ಡಿಪಡಿಸಿದರು‘ ಎಂದು ಒಕ್ಕೂಟ ಹೇಳಿಕೆಯಲ್ಲಿ ತಿಳಿಸಿದೆ.

‘ವೆಬಿನಾರ್‌ನಲ್ಲಿ ಪಾಲ್ಗೊಂಡಿದ್ದ ಅತಿಥೇಯರ ವಿಭಾಗಗಳನ್ನು(ವಿಂಡೊಗಳನ್ನು) ಮುಚ್ಚುತ್ತಿರುವಂತೆ, ವೆಬಿನಾರ್‌ಗೆ ಅಡ್ಡಿಪಡಿಸುವ ವ್ಯಕ್ತಿಗಳ ಕೆಟ್ಟ ಫೋಟೊಗಳು, ವಿಡಿಯೊಗಳು ಹೆಚ್ಚುತ್ತಿದ್ದವು. ಒಂದು ಕಡೆ ಅವುಗಳನ್ನು ತೆಗೆಯುತ್ತಿದ್ದರೆ, ಮತ್ತೊಂದು ಕಡೆ ಇಂಥದ್ದೇ ತಂಡ ಗ್ರೂಪ್‌ ಚಾಟ್‌ನಲ್ಲಿ ಅಶ್ಲೀಲ ಸಂದೇಶಗಳನ್ನು ಪೋಸ್ಟ್ ಮಾಡಲು ಆರಂಭಿಸಿತು. ಅಶ್ಲೀಲ ವಿಷಯಗಳು, ಕೆಟ್ಟ ಮಾತುಗಳೊಂದಿಗೆ ವಿಂಡೊಸ್ಕ್ರೀನ್‌ಗಳು ತೆರೆದುಕೊಳ್ಳಲು ಆರಂಭಿಸಿದವು. ಅತಿಥಿಗಳಿಗೆ ಭಾಷಣ ಮಾಡಲು ಅವಕಾಶ ಸಿಗದೇ, ಅರ್ಧಕ್ಕೆ ಮಾತು ನಿಲ್ಲಿಸಬೇಕಾಯಿತು‘ ಎಂದು ಒಕ್ಕೂಟ ಹೇಳಿಕೆಯಲ್ಲಿ ವಿವರಿಸಿದೆ.

ADVERTISEMENT

ಇದೊಂದು ಆತಂಕಕಾರಿ ಘಟನೆ‘ ಎಂದು ಕರೆದಿರುವ ಒಕ್ಕೂಟ, ‘ವಾಕ್‌ ಸ್ವಾತಂತ್ರ್ಯದ ಮೇಲಿನ ಉಗ್ರ ದಾಳಿ‘ ಎಂದು ಬಣ್ಣಿಸಿದೆ. ಈ ಘಟನೆ ಕುರಿತು ಸೈಬರ್ ಕ್ರೈಮ್ ವಿಭಾಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.

'ಕೇಳದ ಧ್ವನಿಗಳು: ಸಂಘರ್ಷ ವಲಯಗಳಿಂದ ವರದಿಗಾರಿಕೆ' ಕುರಿತ ಸರಣಿಯ ಭಾಗವಾಗಿ ವೆಬ್‌ನಾರ್ ಅನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಕ್ಸಲ್ ಪ್ರದೇಶಗಳಿಂದ ವರದಿ ಮಾಡುತ್ತಿರುವ ಕೆಲವು ಭಾರತೀಯ ಭಾರತೀಯ ಪತ್ರಕರ್ತರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.