ADVERTISEMENT

ಛತ್ತೀಸಗಡದಲ್ಲಿ 8 ಮಂದಿ ನಕ್ಸಲರ ಶರಣಾಗತಿ

ಪಿಟಿಐ
Published 29 ಡಿಸೆಂಬರ್ 2020, 11:44 IST
Last Updated 29 ಡಿಸೆಂಬರ್ 2020, 11:44 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದಾಂತೇವಾಡ: ಛತ್ತೀಸಗಡದ ದಾಂತೇವಾಡ ಜಿಲ್ಲೆಯಲ್ಲಿ ಮಂಗಳವಾರ ಎಂಟು ಮಂದಿ ನಕ್ಸಲರು ಶರಣಾಗಿದ್ದಾರೆ. ಈ ಪೈಕಿ ನಾಲ್ವರು ಕಳೆದ ವರ್ಷ ನಡೆದಿದ್ದ ಬಿಜೆಪಿ ಶಾಸಕನ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ದಕ್ಷಿಣ ಬಸ್ತಾರ್‌ ಭಾಗದಲ್ಲಿ ಕಾರ್ಯನಿರತವಾಗಿದ್ದ ಈ ಪಡೆಯ ಸದಸ್ಯರು ಸಿಆರ್‌ಪಿಎಫ್‌ನ ಹಿರಿಯ ಅಧಿಕಾರಿಗಳ ಎದುರು ಸೋಮವಾರ ಶರಣಾದರು. ಮಾವೊವಾದಿ ಸಿದ್ದಾಂತದ ವಿರುದ್ಧ ಅಸಮಾಧಾನಗೊಂಡು ಶರಣಾಗಿದ್ದಾಗಿ ಅವರು ತಿಳಿಸಿದ್ದಾರೆ.

ಅಲ್ಲದೆ, ಜಿಲ್ಲಾ ಪೊಲೀಸರು ಕೈಗೊಂಡಿದ್ದ ‘ಗ್ರಾಮಕ್ಕೆ ಮರಳಿ’ ಅಭಿಯಾನದಡಿ ಇತ್ತೀಚೆಗೆ ಶರಣಾಗಿದ್ದ ತನ್ನ ಸಹಚರರಿಂದಲೂ ಪ್ರೇರೇಪಣೆಗೊಂಡಿದ್ದಾಗಿ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಶರಣಾದವರ ಪೈಕಿ ಆಯ್ಟು ಭಾಸ್ಕರ್ (25) ಸೆಕ್ಷನ್ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈತನ ಬಗ್ಗೆ ಸುಳಿವು ನೀಡಿದವರಿಗೆ ₹ 3 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ತಿಳಿಸಿದರು.

ಆಯ್ಟು ಭಾಸ್ಕರ್ ಈ ಹಿಂದೆ ಭಾನ್ಸಿಪ್ರದೇಶದಲ್ಲಿ ರೈಲ್ವೆ ಹಳಿ ಜಖಂಗೊಳಿಸಿದ್ದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು 11 ತಿಂಗಳು ಸೆರೆವಾಸ ಅನುಭವಿಸಿದ್ದು, ಜಾಮೀನು ಮೇಲೆ ಹೊರಬಂದಿದ್ದ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.