ADVERTISEMENT

ಎಲ್ಗರ್ ಪ್ರಕರಣ: ಸುಧಾ ಜಾಮೀನು ಅರ್ಜಿಗೆ ಪ್ರತಿಕ್ರಿಯಿಸಲು ಎನ್ಐಎಗೆ ಕೋರ್ಟ್ ಸೂಚನೆ

ಪಿಟಿಐ
Published 22 ಜೂನ್ 2021, 11:32 IST
Last Updated 22 ಜೂನ್ 2021, 11:32 IST
ಸುಧಾ ಭಾರದ್ವಾಜ್‌
ಸುಧಾ ಭಾರದ್ವಾಜ್‌   

ಮುಂಬೈ: ಭೀಮಾ–ಕೊರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್‌ ಅವರ ಜಾಮೀನು ಅರ್ಜಿಗೆ ಪ್ರತಿಕ್ರಿಯೆಯಾಗಿ ಜುಲೈ 3ರೊಳಗೆ ತನ್ನ ಅಫಿಡವಿಟ್ ಸಲ್ಲಿಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ)ಬಾಂಬೆ ಹೈಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಎಸ್.ಎಸ್. ಶಿಂಧೆ ಮತ್ತು ಎನ್.ಜೆ.ಜಮದಾರ್ ಅವರಿದ್ದ ವಿಭಾಗೀಯ ಪೀಠ ಎನ್ಐಎ ಪರ ಹಾಜರಿದ್ದ ವಕೀಲ ಸಂದೇಶ್ ಪಾಟೀಲ್ ಅವರಿಗೆ ಈ ನಿರ್ದೇಶನ ನೀಡಿತು. ಜುಲೈ 3ರಂದು ಮುಂದಿನ ವಿಚಾರಣೆ ನಡೆಸುವುದಾಗಿ ಪೀಠ ಹೇಳಿದೆ.

ಸುಧಾ ಭಾರದ್ವಾಜ್ ಅವರನ್ನು 2018ರಆಗಸ್ಟ್ 28ರಂದು ಬಂಧಿಸಲಾಗಿದ್ದು, ಅಂದಿನಿಂದ ಅವರು ಜೈಲಿನಲ್ಲೇ ಇದ್ದಾರೆ.

ADVERTISEMENT

ಭೀಮಾ ಕೋರೆಗಾಂವ್‌ನಲ್ಲಿ 2017ರ ಡಿಸೆಂಬರ್‌ 31ರಂದು ನಡೆದ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಪೊಲೀಸರು ಸುಧಾ ಭಾರದ್ವಾಜ್‌ ಮತ್ತು ಇತರ ಮೂವರನ್ನು ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿ ಬಂಧಿಸಲಾಗಿದೆ. ಮಾವೊವಾದಿಗಳ ಜತೆಗೂ ಇವರ ಸಂಪರ್ಕವಿದೆ ಎಂದು ಪುಣೆ ಪೊಲೀಸರು ಆರೋಪಿಸಿದ್ದರು. ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಈ ಪ್ರಕರಣದ ತನಿಖೆ ವಹಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.