ADVERTISEMENT

ಎಲ್ಗರ್ ಪರಿಷತ್ ಪ್ರಕರಣ: ಬಿಡುಗಡೆ ಕೋರಿ ಆನಂದ್‌ ತೇಲ್ತುಂಬ್ಡೆ ಅರ್ಜಿ

‘ಸಿಪಿಐ (ಮಾವೋವಾದಿ) ಸದಸ್ಯನೆಂದು ಸಾಬೀತುಪಡಿಸುವಲ್ಲಿ ಎನ್‌ಐಎ ವಿಫಲ’

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 18:21 IST
Last Updated 28 ಏಪ್ರಿಲ್ 2022, 18:21 IST
ಆನಂದ್‌ ತೇಲ್ತುಂಬ್ಡೆ
ಆನಂದ್‌ ತೇಲ್ತುಂಬ್ಡೆ   

ಮುಂಬೈ (ಪಿಟಿಐ): ‘ನಾನು ಸಿಪಿಐ (ಮಾವೋವಾದಿ) ಸಂಘಟನೆ ಸದಸ್ಯ ಎಂಬುದನ್ನು ಸಾಬೀತುಪಡಿಸುವಂತಹ ಸಾಕ್ಷ್ಯಗಳನ್ನು ತನಿಖಾ ಸಂಸ್ಥೆ ಹಾಜರುಪಡಿಸಿಲ್ಲ. ಹೀಗಾಗಿ ನನ್ನನ್ನು ಬಿಡುಗಡೆ ಮಾಡಬೇಕು’ ಎಂದು ಕೋರಿ ಎಲ್ಗರ್ ಪರಿಷತ್– ಮಾವೋವಾದಿ ಸಂಪರ್ಕ ಪ್ರಕರಣದ ಆರೋಪಿ ಆನಂದ್‌ ತೇಲ್ತುಂಬ್ಡೆ ಅವರು ಎನ್‌ಐಎ ವಿಶೇಷ ಕೋರ್ಟ್‌ಗೆ ಗುರುವಾರ ಅರ್ಜಿ ಸಲ್ಲಿಸಿದ್ದಾರೆ.

ತೇಲ್ತುಂಬ್ಡೆ ಪರವಾಗಿ ವಕೀಲರಾದ ಸತ್ಯನಾರಾಯಣನ್ ಹಾಗೂ ನೀರಜ್ ಯಾದವ್‌ ಅವರು ವಿಶೇಷ ಎನ್‌ಐಎ ನ್ಯಾಯಾಧೀಶ ಡಿ.ಇ. ಕೊಥಾಲಿಕರ್ ಅವರಿಗೆ ಅರ್ಜಿ ಸಲ್ಲಿಸಿದರು.

‘ತೇಲ್ತುಂಬ್ಡೆ ಹಾಗೂ ಇತರ ಏಳು ಜನರು ನಿಷೇಧಿತ ಸಿಪಿಐ (ಮಾವೋವಾದಿ) ಸದಸ್ಯರಾಗಿದ್ದು, ವಿವಿಧ ಮಾರ್ಗಗಳ ಮೂಲಕ ಸಂಘಟನೆಯ ಕಾರ್ಯಸೂಚಿಯ ಪ್ರಚಾರದಲ್ಲಿ ತೊಡಗಿದ್ದಾರೆ ಎಂಬುದಾಗಿ ಎನ್‌ಐಎ ಆರೋಪಿಸಿದೆ. ಆದರೆ, ಅರ್ಜಿದಾರಸಿಪಿಐ (ಮಾವೋವಾದಿ) ಸದಸ್ಯ ಎಂಬುದನ್ನು ಸಾಬೀತುಪಡಿಸುವ ದಾಖಲೆಗಳನ್ನು ಎನ್‌ಐಎ ಹಾಜರುಪಡಿಸಿಲ್ಲ’ ಎಂದು ಅರ್ಜಿಯಲ್ಲಿ
ವಿವರಿಸಲಾಗಿದೆ.

ADVERTISEMENT

‘ಆಪಾದಿತರ ವಿರುದ್ಧದ ಆರೋಪಗಳನ್ನು ಪುಷ್ಟೀಕರಿಸುವ ಪ್ರಬಲ ಸಾಕ್ಷ್ಯಾಧಾರಗಳಿದ್ದು, ಆರೋಪಿಯ ಅರ್ಜಿ ಪರಿಗಣಿಸಲು ಅರ್ಹವಾಗಿಲ್ಲ. ಹೀಗಾಗಿ ಅರ್ಜಿಯನ್ನು ವಜಾಗೊಳಿಸಬೇಕು’ ಎಂದು ಎನ್‌ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದರು. ವಿಚಾರಣೆಯನ್ನು ಮೇ 4ಕ್ಕೆ ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.