ಮುಂಬೈ: ಎಲ್ಗಾರ್ ಪರಿಷತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ದೆಹಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಹನಿಬಾಬು ಅವರನ್ನು ವಿಶೇಷ ನ್ಯಾಯಾಲಯ ಆಗಸ್ಟ್ 4ರವರೆಗೆ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ವಶಕ್ಕೆ ನೀಡಿದೆ.
ಎನ್ಐಎ ತಂಡ ಹನಿಬಾಬು ಅವರನ್ನು ಮಂಗಳವಾರ ಬಂಧಿಸಿ, ಬುಧವಾರ ಮುಂಬೈನ ಎನ್ಐಎ ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿಸಿತ್ತು.
‘ತನಿಖೆ ವೇಳೆ ವಶಪಡಿಸಿಕೊಂಡಿರುವದಾಖಲೆಗಳು, ಬಂಧಿತರು ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಸೂಚಿಸುತ್ತವೆ. ಜತೆಗೆ, ಇವರಿಗೆ ಸಿಪಿಐ(ಮಾವೋವಾದಿ) ಪಕ್ಷದೊಂದಿಗೆ ಸಂಬಂಧವಿದೆ‘ ಎಂದು ಎನ್ಐಎ ಅಧಿಕಾರಿ ನ್ಯಾಯಾಲಕ್ಕೆ ತಿಳಿಸಿದರು.
ಆರೋಪಿ ಪರ ಹಾಜರಾಗಿದ್ದ ವಕೀಲರು, ‘ಎನ್ಐಎ ಅಧಿಕಾರಿಗಳು ತಮ್ಮ ಕಕ್ಷಿದಾರರನ್ನು ನಾಲ್ಕೈದು ದಿನಗಳಿಂದ ವಿಚಾರಣೆಗೆ ಒಳಪಡಿಸಿದ್ದಾರೆ. ಹಾಗಾಗಿ ಅವರನ್ನು ಮುಂದಿನ ಕಸ್ಟಡಿಗೆ ಕೊಡುವ ಅಗತ್ಯವಿಲ್ಲ‘ ಎಂದು ವಾದಿಸಿದರು.
ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎ ಟಿ ವಾಂಖೆಡೆ, ‘ಆರೋಪಿ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದ್ದಾಗಿರುವುದಾಗಿ ಕಂಡುಬಂದಿದೆ. ಹಾಗಾಗಿ ನ್ಯಾಯಾಲಯ ಅವರನ್ನು ಏಳು ದಿನಗಳ ಕಾಲ ಎನ್ಐಎ ವಶಕ್ಕೆ ನೀಡುತ್ತಿದೆ‘ ಎಂದು ಆದೇಶಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.