ನವದೆಹಲಿ: ಕಳೆದ ಕೆಲ ದಶಕಗಳಿಂದ ಭಯೋತ್ಪಾದನೆ ಭಿನ್ನ ಹೆಸರು ಮತ್ತು ರೂಪದಲ್ಲಿ ಭಾರತವನ್ನು ಘಾಸಿಗೊಳಿಸಲು ಪ್ರಯತ್ನಿಸಿದ್ದು, ತಮ್ಮ ಸರ್ಕಾರ ಧೈರ್ಯದಿಂದ ಅದರ ವಿರುದ್ಧ ಹೋರಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
‘ಭಯೋತ್ಪಾದನೆಗೆ ಹಣವಿಲ್ಲ’ ಎಂಬ ವಿಷಯದ ಕುರಿತಾಗಿನ ಸಚಿವರ ಸಭೆಯಲ್ಲಿ ಮಾತನಾಡಿದ ಮೋದಿ, ವಿವಿಧ ಭಯೋತ್ಪಾದಕ ದಾಳಿಗಳಿಗೆ ನೀಡುವ ಪ್ರತಿಕ್ರಿಯೆಯ ಕೃತ್ಯದ ತೀವ್ರತೆ ಹಾಗೂ ಕೃತ್ಯ ಎಲ್ಲಿ ನಡೆಯುತ್ತದೆ ಎಂಬುದರ ಆಧಾರದ ಮೇಲೆ ಬದಲಾಗುವುದಿಲ್ಲ. ಎಲ್ಲಾ ಭಯೋತ್ಪಾದಕ ದಾಳಿಗಳು ಸಮಾನ ಆಕ್ರೋಶ ಮತ್ತು ಕ್ರಮಕ್ಕೆ ಅರ್ಹವಾಗಿವೆ. ಭಯೋತ್ಪಾದನೆಯನ್ನು ಬುಡಸಮೇತ ಕಿತ್ತೆಸೆಯುವವರೆಗೆ ತಾವು ವಿಶ್ರಾಂತಿ ಪಡೆಯುವುದಿಲ್ಲ’ ಎಂದರು.
ಭಯೋತ್ಪಾದನೆ ಮಾನವೀಯತೆ, ಸ್ವಾತಂತ್ರ್ಯ ಮತ್ತು ನಾಗರಿಕತೆಯ ಮೇಲಿನ ದಾಳಿ. ವಿಶ್ವವು ಭಯೋತ್ಪಾದನೆಯನ್ನು ಗಂಭೀರವಾಗಿ ಪರಿಗಣಿಸುವ ಮೊದಲೇ ನಮ್ಮ ದೇಶವು ಅದರ ಕರಾಳ ಮುಖವನ್ನು ನೋಡಿದೆ ಎಂದು ಅವರು ತಿಳಿಸಿದರು.
‘ತಾವು ಒಂದೇ ಒಂದು ಭಯೋತ್ಪಾದಕ ದಾಳಿಯನ್ನು ಕೂಡ ಲಘುವಾಗಿ ಪರಿಗಣಿಸುವುದಿಲ್ಲ. ಪ್ರತಿ ಜೀವಕ್ಕೂ ಬೆಲೆಯಿದೆ. ಭಯೋತ್ಪಾದನೆಗೆ ಬೆಂಬಲ ನೀಡುವ ದೇಶಗಳು ಅದರ ಪರಿಣಾಮ ಎದುರಿಸುತ್ತವೆ’ ಎಂದು ಮೋದಿ ಗುಡುಗಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.