ಭೋಪಾಲ್: ಪಾಕಿಸ್ತಾನ ಕೂಡ ಪ್ರಧಾನಿ ನರೇಂದ್ರ ಮೋದಿ ಅವರಂತಹ ನಾಯಕನನ್ನು ಬಯಸುತ್ತದೆ ಎಂದು ಸ್ವತಃ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಶನಿವಾರ ಹೇಳಿದ್ದಾರೆ.
ಭೋಪಾಲ್ನ ಆನಂದ ನಗರ ಪ್ರದೇಶದ ರಾಮ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಯಾದವ್, ಮೋದಿ ಕಾರ್ಯ ನಿರ್ವಹಿಸುವಾಗ ಮತ್ತು ನಿರ್ಧಾರ ತೆಗೆದುಕೊಳ್ಳುವಾಗ ಫಲಿತಾಂಶಗಳ ಮೇಲೆ ಜಗತ್ತು ದೃಷ್ಟಿಯಿಟ್ಟಿರುವುದಕ್ಕೆ ಭಾರತ ಸಾಕ್ಷಿಯಾಗಿದೆ ಎಂದು ಹೇಳಿದರು.
ನಾವು ಮಾತ್ರವಲ್ಲ, ನೆರೆಯ ದೇಶಗಳೂ ಇದನ್ನೇ ಹೇಳುತ್ತವೆ. ಇಮ್ರಾನ್ ಖಾನ್ ಕೂಡ ಮೋದಿ ಅವರಂತ ನಾಯಕನನ್ನು ನಾನು ಬಯಸುತ್ತೇನೆ ಎಂದು ತಮ್ಮ ದೇಶದ ಜನರಿಗೆ ಹೇಳುತ್ತಾರೆ. ನಾವು ಮೋದಿ ಅವರಿಂದ ಕಲಿಯಬೇಕು ಎಂದು ಸಿಎಂ ಯಾದವ್ ಹೇಳಿದರು.
ಇನ್ನು ರಾಮನ ನಂತರ 17 ಲಕ್ಷ ವರ್ಷಗಳಾದರೂ ರಾಮರಾಜ್ಯ ಇರಬೇಕು ಎಂಬ ಭಾವನೆ ಇದೆ. ಪ್ರತಿಯೊಬ್ಬರೂ ರಾಮನಂತಹ ಮಗನನ್ನು ಬಯಸುತ್ತಾರೆ ಎಂದೂ ಅವರು ಹೇಳಿದರು.
ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದ್ದು, ಮಧ್ಯಪ್ರದೇಶ ಸರ್ಕಾರ ಈಗಾಗಲೇ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ಮತ್ತು ರಾಜ್ಯದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಮಾಂಸದಂಗಡಿ, ಕಸಾಯಿಖಾನೆಗಳನ್ನು ಮುಚ್ಚುವಂತೆಯೂ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.