ಲಖನೌ:ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಪ್ರಮುಖ ರಾಜಕೀಯ ಪಕ್ಷಗಳು ಜಾತಿ ಸಮೀಕರಣದ ಹೊಂದಾಣಿಕೆಯಲ್ಲಿ ತೊಡಗಿವೆ. ರಾಜ್ಯದ ಪ್ರಭಾವಿ ಸಮುದಾಯ ಎನಿಸಿರುವ ‘ಬ್ರಾಹ್ಮಣ’ರ ಮೇಲೆ ಎಲ್ಲರ ಕಣ್ಣು ಬಿದ್ದಿದೆ.
ಕಾಂಗ್ರೆಸ್ ಪಕ್ಷವು ‘ಬ್ರಾಹ್ಮಣ ಚೇತನ ಪರಿಷತ್’ ಘಟಕದ ಮೂಲಕ ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ಯಾತ್ರೆ ನಡೆಸುತ್ತಿದೆ. ‘ಸಮುದಾಯದ ನ್ಯಾಯಕ್ಕಾಗಿ ಅಭಿಯಾನ’ ಎಂದು ಇದನ್ನು ಕರೆದಿದೆ.2007ರಲ್ಲಿ ಬ್ರಾಹ್ಮಣ ಮತ್ತು ದಲಿತ ಸಮೀಕರಣವನ್ನು ಪ್ರಯೋಗಿಸಿ ಅಧಿಕಾರ ಹಿಡಿದಿದ್ದ ಬಿಎಸ್ಪಿ, ಈ ಬಾರಿ ಸಮುದಾಯದ ಓಲೈಕೆಗಾಗಿ ‘ಪ್ರಬುದ್ಧ ಸಮ್ಮೇಳನ’ಗಳನ್ನು ಬ್ರಾಹ್ಮಣರಿಗಾಗಿ ಆಯೋಜಿಸಿದೆ.
ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವುದಾಗಿ ಕಾಂಗ್ರೆಸ್ ಈಗಾಗಲೇ ಸುಳಿವು ನೀಡಿದೆ. ಈ ವಿಚಾರದಲ್ಲಿ ತಾನೇನೂ ಹಿಂದೆ ಬೀಳದ ಬಿಜೆಪಿ, ‘ಪ್ರಬುದ್ಧ ವರ್ಗ ಸಮ್ಮೇಳನ’ಗಳ ಸರಣಿಯನ್ನೇ ಆಯೋಜಿಸಿದೆ.
ಸಮಾಜವಾದಿ ಪಕ್ಷವು ರಾಜ್ಯದ ವಿವಿಧ ಭಾಗಗಳಲ್ಲಿ ಪರಶುರಾಮನ ಪ್ರತಿಮೆಗಳನ್ನು ಸ್ಥಾಪಿಸುವುದಾಗಿ ಘೋಷಿಸಿದೆ. ಎಲ್ಲ 403 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿರುವ ಆಮ್ ಆದ್ಮಿ ಪಕ್ಷವು, ‘ಚಾಣಕ್ಯ ವಿಚಾರ ಸಮ್ಮೇಳನ’ಗಳನ್ನು ಆಯೋಜಿಸುವ ಉದ್ದೇಶ ಹೊಂದಿದೆ.
ರಾಜ್ಯದಲ್ಲಿ ಶೇ 13ರಷ್ಟಿರುವ ಬ್ರಾಹ್ಮಣರನ್ನು ಈ ಬಾರಿ ಯಾವ ಪಕ್ಷ ಸೆಳೆಯಲಿದೆ ಎಂಬುದುನ್ನು ಕಾದುನೋಡಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.