ADVERTISEMENT

ಬಯಲುಶೌಚಮುಕ್ತ ಘೋಷಣೆ ನಂಬಲನರ್ಹ

ಅವೈಜ್ಞಾನಿಕವಾಗಿ ಜಾರಿ, ಸ್ವಚ್ಛ ಭಾರತ ಯೋಜನೆ ವಿಫಲವಾಗುವ ಸಾಧ್ಯತೆಯೇ ಹೆಚ್ಚು: ತಜ್ಞರ ಅಭಿಮತ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 19:49 IST
Last Updated 3 ಅಕ್ಟೋಬರ್ 2019, 19:49 IST
ದೆಹಲಿಯ ನಿಜಾಮುದ್ದೀನ್ ರೈಲು ನಿಲ್ದಾಣದ ಬಳಿ ಬಯಲುಶೌಚ
ದೆಹಲಿಯ ನಿಜಾಮುದ್ದೀನ್ ರೈಲು ನಿಲ್ದಾಣದ ಬಳಿ ಬಯಲುಶೌಚ   

‘ಭಾರತವು ಬಯಲುಶೌಚಮುಕ್ತ ದೇಶವಾಗಿದೆ ಎಂದು ಸರ್ಕಾರ ಮಾಡಿರುವ ಘೋಷಣೆ ಮತ್ತು ಸರ್ಕಾರ ನೀಡುತ್ತಿರುವ ಅಂಕಿಅಂಶ ನಂಬಲರ್ಹವಲ್ಲ’ ಎಂದು ಪರಿಣತರು ಹೇಳಿದ್ದಾರೆ. ಸರ್ಕಾರದ ದತ್ತಾಂಶದ ಪ್ರಕಾರ ಇನ್ನೂ ಲಕ್ಷಾಂತರ ಶೌಚಾಲಯಗಳು ನಿರ್ಮಾಣವಾಗಬೇಕಿದೆ

‘ಘೋಷಣೆಯೇ ಅವೈಜ್ಞಾನಿಕ’

‘2012ರಲ್ಲಿ ನಡೆಸಲಾಗಿದ್ದ ಸಮೀಕ್ಷೆಯ ವರದಿಯ ಆಧಾರದ ಮೇಲೆ, ಅಗತ್ಯವಿರುವ ಶೌಚಾಲಯಗಳ ಸಂಖ್ಯೆಯನ್ನು ಅಂದಾಜಿಸಲಾಗಿತ್ತು. ಆ ಅಂದಾಜಿಗೆ ಅನುಗುಣವಾಗಿಯೇ ಸ್ವಚ್ಛ ಭಾರತ ಯೋಜನೆ ಅಡಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಈ ದತ್ತಾಂಶಗಳು ತೀರಾ ಹಳತಾಗಿವೆ. ಸ್ವಚ್ಛ ಭಾರತ ಯೋಜನೆ ಜಾರಿಗೆ ತಂದದ್ದು 2014ರ ಅಕ್ಟೋಬರ್‌ನಲ್ಲಿ. 2012 ಮತ್ತು 2014ರ ಮಧ್ಯೆ ಪರಿಸ್ಥಿತಿ ತೀರಾ ಬದಲಾಗಿದೆ. ಹೀಗಾಗಿ 2012ರ ದತ್ತಾಂಶಗಳನ್ನು ಇಟ್ಟುಕೊಂಡೇ ಬಯಲುಶೌಚಮುಕ್ತ ಘೋಷಣೆ ಮಾಡಿರುವುದು ಅವೈಜ್ಞಾನಿಕ. ಈ ಘೋಷಣೆ ನಂಬಿಕೆಗೆ ಅನರ್ಹವಾಗಿದೆ’ ಎಂದು ಆರೋಗ್ಯ ಮತ್ತು ನೈರ್ಮಲ್ಯ ತಜ್ಞ ಡಾ.ಸುಮೇಧ್ ವಿವರಿಸಿದ್ದಾರೆ.

ADVERTISEMENT

ಶೌಚಾಲಯ ನಿರ್ಮಿಸಿದರೆ ಸಾಕೇ?

‘ಸ್ವಚ್ಛ ಭಾರತ ಯೋಜನೆ ಅಡಿ ಸರ್ಕಾರವು ಶೌಚಾಲಯ ನಿರ್ಮಾಣಕ್ಕೆ ಮಾತ್ರ ಆದ್ಯತೆ ನೀಡುತ್ತಿದೆ. ಆದರೆ ಶೌಚಾಲಯ ಬಳಕೆಗೆ ಅಗತ್ಯವಾದ ನೀರಿನ ಲಭ್ಯತೆ ಮತ್ತು ಪೂರೈಕೆಯನ್ನು ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ. ಬಯಲು ಶೌಚಕ್ಕೆ ಬೇಕಾಗುವ ನೀರಿಗಿಂತ ಅಧಿಕ ಪ್ರಮಾಣದ ನೀರು ಶೌಚಾಲಯಗಳ ಬಳಕೆಗೆ ಬೇಕು. ನೀರಿನ ಕೊರತೆಯ ಕಾರಣ ಜನರು ಶೌಚಾಲಯ ಬಳಕೆಯಿಂದ ದೂರ ಸರಿಯುತ್ತಿದ್ದಾರೆ’ ಎಂದು ಸೆಂಟರ್‌ ಫಾರ್ ಸೈನ್ಸ್‌ ಅಂಡ್‌ ಎನ್ವಿರಾನ್ಮೆಂಟ್‌ (ಸಿಎಸ್‌ಇ) ಸ್ವಯಂ ಸೇವಾ ಸಂಸ್ಥೆ ಹೇಳಿದೆ.

‘ಹರಿಯಾಣವನ್ನು 2017ರಲ್ಲೇ ಬಯಲು ಶೌಚಮುಕ್ತ ರಾಜ್ಯ ಎಂದು ಘೋಷಿಸಲಾಗಿದೆ. ಆದರೆ ಆ ರಾಜ್ಯದಲ್ಲಿ ಶೇ 30ಕ್ಕೂ ಹೆಚ್ಚು ಜನರು ಶೌಚಾಲಯಗಳನ್ನು ಬಳಸುತ್ತಿಲ್ಲ. ಬೇರೆ ರಾಜ್ಯಗಳಲ್ಲೂ ಲಕ್ಷಾಂತರ ಜನರು ಮತ್ತೆ ಬಯಲು ಶೌಚಕ್ಕೆ ಮರಳುತ್ತಿದ್ದಾರೆ. ಹೀಗಾಗಿ ದೀರ್ಘಾವಧಿಯಲ್ಲಿ ಈ ಯೋಜನೆ ವಿಫಲವಾಗುವ ಸಾಧ್ಯತೆಯೇ ಹೆಚ್ಚು’ ಎಂದು ಸಿಎಸ್‌ಇ ಹೇಳಿದೆ.

ಶೌಚಾಲಯ ನಿರ್ಮಿಸಿದರೆ ಸಾಕೇ?

‘ಸ್ವಚ್ಛ ಭಾರತ ಯೋಜನೆ ಅಡಿ ಸರ್ಕಾರವು ಶೌಚಾಲಯ ನಿರ್ಮಾಣಕ್ಕೆ ಮಾತ್ರ ಆದ್ಯತೆ ನೀಡುತ್ತಿದೆ. ಆದರೆ ಶೌಚಾಲಯ ಬಳಕೆಗೆ ಅಗತ್ಯವಾದ ನೀರಿನ ಲಭ್ಯತೆ ಮತ್ತು ಪೂರೈಕೆಯನ್ನು ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ. ನೀರಿನ ಕೊರ ತೆಯ ಕಾರಣ ಜನರು ಶೌಚಾಲಯ ಬಳಕೆಯಿಂದ ದೂರ ಸರಿಯುತ್ತಿದ್ದಾರೆ’ ಎಂದು ಸೆಂಟರ್‌ ಫಾರ್ ಸೈನ್ಸ್‌ ಅಂಡ್‌ ಎನ್ವಿರಾನ್ಮೆಂಟ್‌ (ಸಿಎಸ್‌ಇ) ಸ್ವಯಂ ಸೇವಾ ಸಂಸ್ಥೆ ಹೇಳಿದೆ.

ಶೌಚ ತ್ಯಾಜ್ಯ ವಿಲೇವಾರಿ ಹೇಗೆ?: ‘ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಿಸಲಾದ ಶೌಚಾಲಯಗಳ ಜತೆಗೆ ‘ಸೆಪ್ಟಿಕ್‌ ಟ್ಯಾಂಕ್‌’ಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸ ಲಾಗಿದೆ. ಈ ಟ್ಯಾಂಕ್‌ಗಳ ನಿರ್ಮಾಣಕ್ಕೆ ಸರ್ಕಾರವು ಮಾನದಂಡ ರೂಪಿಸಿಲ್ಲ. ಇಲ್ಲಿ ಸಂಗ್ರಹವಾಗುವ ತ್ಯಾಜ್ಯವು ಗೊಬ್ಬರವಾಗುವುದಿಲ್ಲ. ಹೀಗಾಗಿ ಈ ತ್ಯಾಜ್ಯದ ವಿಲೇವಾರಿಯು ಭಾರಿ ಸಮಸ್ಯೆಯಾಗಲಿದೆ’ ಎಂದು ಸಿಎಸ್‌ಇ ಕಳವಳ ವ್ಯಕ್ತಪಡಿಸಿದೆ.

ಭಿನ್ನ ಮಾಹಿತಿ

‘ಭಾರತವು ಬಯಲುಶೌಚಮುಕ್ತ ದೇಶವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಘೋಷಿಸಿದ್ದರು.

ಆದರೆ, ‘ಪಶ್ಚಿಮ ಬಂಗಾಳದ 52 ಸ್ಥಳೀಯಾಡಳಿತ ಸಂಸ್ಥೆಗಳನ್ನು ಈವರೆಗೆ ಬಯಲುಶೌಚಮುಕ್ತ ಎಂದು ಘೋಷಿಸಿಲ್ಲ’ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಹರ್‌ದೀಪ್‌ ಸಿಂಗ್ ಅವರೇ ಬುಧವಾರ ಹೇಳಿದ್ದರು.

ಸ್ವಚ್ಛ ಭಾರತದ ಅಡಿ ಮನೆಗಳಲ್ಲಿ ಶೌಚಾಲಯ ನಿರ್ಮಿಸಲು ಸರ್ಕಾರ ಸಹಾಯಧನ ಒದಗಿಸುತ್ತಿದೆ. ಅಗತ್ಯವಿರುವವರು ಸಹಾಯ ಧನಕ್ಕೆ ಅರ್ಜಿ ಸಲ್ಲಿಸಬಹುದು. ಹೀಗೆ ಸಲ್ಲಿಸಲಾದ ಅರ್ಜಿಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಅರ್ಜಿಗಳು ತಿರಸ್ಕೃತವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.