ADVERTISEMENT

‘ಭಾರತ ಆಕ್ರಮಿತ ಕಾಶ್ಮೀರ’ ಪೋಸ್ಟ್‌ ಬಗ್ಗೆ ಕೇರಳ ರಾಜ್ಯಪಾಲ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 8:36 IST
Last Updated 14 ಆಗಸ್ಟ್ 2022, 8:36 IST
ಆರಿಫ್‌ ಮೊಹಮದ್‌ ಖಾನ್‌
ಆರಿಫ್‌ ಮೊಹಮದ್‌ ಖಾನ್‌    

ತಿರುವನಂತಪುರ: ಜಮ್ಮು ಮತ್ತು ಕಾಶ್ಮೀರವನ್ನು 'ಭಾರತದ ಅಧೀನ ಜಮ್ಮು ಮತ್ತು ಕಾಶ್ಮೀರ’ (ಭಾರತ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ) ಎಂದೂ, ಪಾಕ್ ಆಕ್ರಮಿತ ಕಾಶ್ಮೀರವನ್ನು 'ಆಜಾದ್ ಕಾಶ್ಮೀರ' ಎಂದೂ ಫೇಸ್‌ಬುಕ್‌ನಲ್ಲಿ ಉಲ್ಲೇಖಿಸಿದ್ದ ಕೇರಳದ ಮಾಜಿ ಸಚಿವ ಮತ್ತು ಆಡಳಿತಾರೂಢ ಎಲ್‌ಡಿಎಫ್‌ ಬೆಂಬಲಿತ ಶಾಸಕ ಕೆ ಟಿ ಜಲೀಲ್ ಅವರ ಹೇಳಿಕೆ ವಿರುದ್ಧ ಕೇರಳ ರಾಜ್ಯಪಾಲ ಆರಿಫ್‌ ಮೊಹಮದ್‌ ಖಾನ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, 'ಜಲೀಲ್‌ ಅವರ ಪೋಸ್ಟ್ ದುರದೃಷ್ಟಕರ. ಈ ಹೇಳಿಕೆ ಅನಿರೀಕ್ಷಿತವಾದದ್ದಲ್ಲ ಎಂದು ನನಗನಿಸುತ್ತದೆ. ಇಂಥವುಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.

ADVERTISEMENT

ಎಡರಂಗ ಬೆಂಬಲಿತ ಸ್ವತಂತ್ರ ಶಾಸಕರಾಗಿರುವ ಶಾಸಕ ಜಲೀಲ್‌ ಅವರ ವಿರುದ್ಧ ಮುಖ್ಯಮಂತ್ರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮತ್ತು ಕಾಂಗ್ರೆಸ್‌ ಆಗ್ರಹಿಸಿವೆ.

ಆದರೆ, ಜಲೀಲ್‌ ಅವರ ಹೇಳಿಕೆಯು ಸಿಪಿಎಂನ ನಿಲುವು ಅಲ್ಲ ಎಂದು ಕೇರಳದ ಸಚಿವ ಎಂ.ವಿ. ಗೋವಿಂದನ್‌ ಸ್ಪಷ್ಟಪಡಿಸಿದ್ದರು.

ವಿವಾದ ಹಿನ್ನೆಲೆಯಲ್ಲಿ, ಜಲೀಲ್‌ ತಮ್ಮ ಫೇಸ್‌ಬುಕ್‌ ಪೋಸ್ಟ್‌ ಅನ್ನು ಡಿಲಿಟ್‌ ಮಾಡಿದ್ದರು. 'ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕುರಿತ ಹೇಳಿಕೆಯು ತಪ್ಪು ತಿಳಿವಳಿಕೆಗೆ ಕಾರಣವಾಗಿತ್ತು ಮತ್ತು ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿತ್ತು. ಈ ಕಾರಣಕ್ಕೆ ಅದನ್ನು ಹಿಂಪಡೆದುಕೊಳ್ಳುತ್ತೇನೆ' ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.