ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರು ಸರ್ಕಾರಿ ಹುದ್ದೆಗಳಿಗೆ ಅಪರಾಧ ಹಿನ್ನೆಲೆಯುಳ್ಳವರನ್ನು ನೇಮಿಸುವ ಮೂಲಕ ರಾಜಕೀಯ ಅಪರಾಧೀಕರಣಕ್ಕೆ ಉತ್ತೇಜನ ನೀಡಿದ್ದಾರೆ ಎಂದು ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಅಪರಾಧ ಹಿನ್ನೆಲೆಯುಳ್ಳವರನ್ನು ಸರ್ಕಾರಿ ಹುದ್ದೆಗಳಿಗೆ ನೇಮಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಆರೋಪಿಯಾದ ಮುನ್ನಾ ಯಾದವ್ ಅವರನ್ನು ಮಹಾರಾಷ್ಟ್ರ ನಿರ್ಮಾಣ ವಲಯದ ಕಾರ್ಮಿಕರ ಕಲ್ಯಾಣ ಮಂಡಳಿಗೆ ಅಧ್ಯಕ್ಷರನ್ನಾಗಿ ಫಡಣವಿಸ್ ನೇಮಿಸಿದ್ದಾರೆ ಎಂದು ಮಲಿಕ್ ಉದಾಹರಣೆ ನೀಡಿದರು.
ಬರುವ ದಿನಗಳಲ್ಲಿ ಮತ್ತಷ್ಟು ಸ್ಫೋಟಕ ಮಾಹಿತಿಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು.ಮಲಿಕ್ ಅವರ ಆರೋಪಕ್ಕೆ ಫಡಣವೀಸ್ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಭೂಹಗರಣವೊಂದರಲ್ಲಿ ಸಚಿವ ಮಲಿಕ್, ಅವರ ಕುಟುಂಬದ ಸದಸ್ಯರು ಮತ್ತು 1993ರ ಮುಂಬೈನ ಸರಣಿ ಸ್ಫೋಟದ ಇಬ್ಬರು ಆರೋಪಿಗಳು ಭಾಗಿಯಾಗಿದ್ದಾರೆ ಎಂದು ಫಡಣವಿಸ್ ಮಂಗಳವಾರ ಆರೋಪಿಸಿದ್ದರು. ಆದರೆ ಮಲಿಕ್ ಇದನ್ನು ತಳ್ಳಿ ಹಾಕಿದ್ದರು.
‘2016ರ ನವೆಂಬರ್ 8ರಂದು ನೋಟು ಅಮಾನ್ಯೀಕರಣವಾದ ನಂತರ ವಿವಿಧ ರಾಜ್ಯಗಳಲ್ಲಿ ವಶಪಡಿಸಿಕೊಂಡ ನಕಲಿ ನೋಟುಗಳ ಪ್ರಕರಣವನ್ನು ಮುಚ್ಚಿ ಹಾಕಲು ಫಡಣವೀಸ್ ಸಹಾಯ ಮಾಡಿದರು. ವಶಪಡಿಸಿಕೊಂಡಿದ್ದ ₹14.56 ಕೋಟಿ ಮೊತ್ತದ ಬದಲಿಗೆ ₹ 8.8 ಲಕ್ಷ ತೋರಿಸಲಾಗಿದೆ’ ಎಂದು ಸಚಿವ ಮಲಿಕ್ ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.