ADVERTISEMENT

ಕೇರಳ: ಪ್ರಸಿದ್ಧ ಟೀ ಸ್ಟಾಲ್‌ ಮಾಲೀಕ ಕೆ.ಆರ್‌.ವಿಜಯನ್‌ ಸಾವು

ಪಿಟಿಐ
Published 19 ನವೆಂಬರ್ 2021, 14:30 IST
Last Updated 19 ನವೆಂಬರ್ 2021, 14:30 IST
ಕೇರಳ: ಪ್ರಸಿದ್ಧ ಟೀ ಸ್ಟಾಲ್‌ ಮಾಲೀಕ ಕೆ.ಆರ್‌.ವಿಜಯನ್‌ ಸಾವು (ಡೆಕ್ಕನ್ ಹೆರಾಲ್ಡ್ ಚಿತ್ರ)
ಕೇರಳ: ಪ್ರಸಿದ್ಧ ಟೀ ಸ್ಟಾಲ್‌ ಮಾಲೀಕ ಕೆ.ಆರ್‌.ವಿಜಯನ್‌ ಸಾವು (ಡೆಕ್ಕನ್ ಹೆರಾಲ್ಡ್ ಚಿತ್ರ)   

ಕೊಚ್ಚಿ: ತಮ್ಮ ಉಳಿತಾಯದ ಹಣದಿಂದ ಪತ್ನಿಯೊಂದಿಗೆ ಪ್ರಪಂಚದಾದ್ಯಂತ ಪ್ರವಾಸ ಮಾಡಿ ಜಾಗತಿಕ ಖ್ಯಾತಿ ಪಡೆದಿದ್ದ ಕೊಚ್ಚಿ ಮೂಲದ ಟೀ ಸ್ಟಾಲ್‌ ಮಾಲೀಕ ಕೆ.ಆರ್‌.ವಿಜಯನ್ ಅವರು ಶುಕ್ರವಾರ ಇಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಅವರ ಕುಟುಂಬದ ಮೂಲಗಳು ಹೇಳಿವೆ.

ವಿಜಯನ್ ಅವರಿಗೆ ಪತ್ನಿ, ಇಬ್ಬರು ಪುತ್ರಿಯರಾದ ಶಶಿಕಲಾ, ಉಷಾ ಮತ್ತು ಮೂರು ಮೊಮ್ಮಕ್ಕಳು ಇದ್ದಾರೆ.

ವಿಜಯನ್‌ (71) ತಮ್ಮ ಪತ್ನಿ ಮೋಹನಾ ಅವರೊಂದಿಗೆ ಇಲ್ಲಿ ‘ಶ್ರೀ ಬಾಲಾಜಿ ಕಾಫಿ ಹೌಸ್‌’ ಎಂಬ ಸಾಧಾರಣ ಟೀ ಸ್ಟಾಲ್‌ ಅನ್ನು ಹೊಂದಿದ್ದರು. ಅವರು ತಮ್ಮ ಗಳಿಕೆಯ ಹಣದಿಂದ ವಿಶ್ವ ಪ್ರವಾಸ ಮಾಡಿದ ನಂತರ ಪ್ರಸಿದ್ಧಿ ಪಡೆದರು.

ADVERTISEMENT

ದಂಪತಿಯು ಅಕ್ಟೋಬರ್‌ 21 ರಂದು ರಷ್ಯಾ ಪ್ರವಾಸ ಕೈಗೊಂಡು ಅಕ್ಟೋಬರ್‌ 28 ರಂದು ಮರಳಿದ್ದರು. ಇಬ್ಬರೂ ತಮ್ಮ ಪ್ರತಿದಿನದ ಸಂಪಾದನೆಯಲ್ಲಿ ₹300 ಉಳಿಸುತ್ತಿದ್ದರು. ಈ ಮೂಲಕ ಕೂಡಿಟ್ಟ ಹಣದಿಂದ 2007ರಲ್ಲಿ ಮೊದಲ ಬಾರಿಗೆ ಇಸ್ರೇಲ್‌ ಪ್ರವಾಸ ಮಾಡಿದ್ದರು.

ಕಳೆದ 14 ವರ್ಷಗಳಲ್ಲಿ ದಂಪತಿಯು 26 ದೇಶಗಳಿಗೆ ಪ್ರವಾಸ ಮಾಡಿದ್ದಾರೆ. ಅವರು ತಮ್ಮ ಪ್ರಯಾಣಕ್ಕಾಗಿ ಸಣ್ಣ ಮೊತ್ತದ ಸಾಲವನ್ನೂ ಪಡೆಯುತ್ತಿದ್ದರು.

ದಂಪತಿಯ ಪ್ರವಾಸದ ಬಗ್ಗೆ ಸಾಮಾಜಿಕ ಮಾಧ್ಯಮದಿಂದ ತಿಳಿದ ಉದ್ಯಮಿ ಆನಂದ್‌ ಮಿಶ್ರಾ ಅವರು ದಂಪತಿಗೆ 2019ರಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಧನ ಸಹಾಯ ಮಾಡಿದ್ದರು. ನಂತರದಲ್ಲಿ ದಂಪತಿಯ ವಿದೇಶ ಪ್ರವಾಸ ಸುದ್ದಿ ವೈರಲ್‌ ಆಯಿತು.

‘ವಾರಕ್ಕೆ ಎರಡು ಬಾರಿಯಾದರೂ ಚಹ ನೀಡುತ್ತಿದ್ದ, ತಮ್ಮ ಪ್ರವಾಸದ ಕಥೆಗಳನ್ನು ಹೇಳುತ್ತಿದ್ದ, ಯುವ ಮನಸ್ಸಿನ ಗೆಳೆಯ ಎರ್ನಾಕುಲಂನ ಚಹ ಮಾರಾಟಗಾರ ವಿಜಯನ್‌ ಅಗಲಿದ್ದಾರೆ. ಅವರು ಈಗಷ್ಟೆ ರಷ್ಯಾದಿಂದ ಮರಳಿದ್ದರು. ಅವರು ಅಧ್ಯಕ್ಷ ಪುಟಿನ್‌ ಅವರನ್ನು ಭೇಟಿ ಮಾಡಲು ಬಯಸಿದ್ದರು’ ಎಂದು ಪ್ರಸಿದ್ಧ ಬರಹಗಾರ ಎನ್‌.ಎಸ್‌.ಮಾಧವನ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.