ADVERTISEMENT

ಹಾಥರಸ್‌ ವರದಿಗೆ ತೆರಳಿದ್ದ ಕೇರಳ ಪತ್ರಕರ್ತನ ಬಿಡುಗಡೆಗೆ ಆಗ್ರಹ: ಕುಟುಂಬದವರ ಧರಣಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2020, 10:51 IST
Last Updated 17 ಅಕ್ಟೋಬರ್ 2020, 10:51 IST
ಸಿದ್ದಿಕಿ ಸೇರಿದಂತೆ ಮೂವರನ್ನು ಉತ್ತರ ಪ್ರದೇಶ ಪೊಲೀಸರು ಇತ್ತೀಚೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು (ಸಂಗ್ರಹ ಚಿತ್ರ)
ಸಿದ್ದಿಕಿ ಸೇರಿದಂತೆ ಮೂವರನ್ನು ಉತ್ತರ ಪ್ರದೇಶ ಪೊಲೀಸರು ಇತ್ತೀಚೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು (ಸಂಗ್ರಹ ಚಿತ್ರ)   

ತಿರುವನಂತಪುರ: ಕಾನೂನು ಬಾಹಿರ ಚಟುವಟಿಕೆ ನಿಗ್ರಹ ಕಾಯ್ದೆಯಡಿ(ಯುಎಪಿಎ)ಉತ್ತರ ಪ್ರದೇಶ ಪೊಲೀಸರು ಬಂಧಿಸಿರುವ ಕೇರಳ ಮೂಲದ ಪತ್ರಕರ್ತನ ಬಿಡುಗಡೆಗೆ ಆಗ್ರಹಿಸಿ ಪತ್ರಕರ್ತನ ಕುಟುಂಬ ಸದಸ್ಯರು ಹಾಗೂ ಹಿರಿಯ ಪತ್ರಕರ್ತರು ಮಲಪ್ಪುರಂ ಜಿಲ್ಲಾಧಿಕಾರಿ ಕಚೇರಿ ಮುಂದೆ ಶನಿವಾರ ಧರಣಿ ನಡೆಸಿದರು.

ಪತ್ರಕರ್ತ ಸಿದ್ದಿಕಿ ಕಪ್ಪಣ್‌ ಅವರ ಪತ್ನಿ, ಮಕ್ಕಳೂ ಧರಣಿಯಲ್ಲಿದ್ದರು. ‘ನನ್ನ ಪತಿ ಯಾವ ಕಾನೂನು ಬಾಹಿರ ಚಟುವಟಿಕೆ ನಡೆಸಿದ್ದಾರೆ ಎನ್ನುವುದನ್ನು ಪೊಲೀಸರು ತಿಳಿಸಬೇಕು. ಅವರ ವಿರುದ್ಧ ದಾಖಲಿಸಲಾಗಿರುವ ಪ್ರಕರಣವು ಸುಳ್ಳಾಗಿದ್ದು, ಬಿಡುಗಡೆಯಾಗುವವರೆಗೂ ಕುಟುಂಬ ಸದಸ್ಯರು ಹೋರಾಟ ನಡೆಸಲಿದ್ದೇವೆ’ ಎಂದು ರಹೀಯತ್‌ನಾತ್‌ ತಿಳಿಸಿದರು.

ಕಾಂಗ್ರೆಸ್‌ ಸಂಸದ ಟಿ.ಎನ್‌.ಪ್ರತಾಪನ್‌ ಧರಣಿಯಲ್ಲಿ ಭಾಗಿಯಾಗಿದ್ದರು. ಹಲವು ರಾಜಕೀಯ ಸಂಘಟನೆಗಳೂ ಧರಣಿಗೆ ಬೆಂಬಲ ನೀಡಿವೆ. ಸಿದ್ದಿಕಿ ಅವರಿಗೆ ನ್ಯಾಯ ದೊರಕಿಸಲು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇರಳ ಮುಖ್ಯಮಂತ್ರಿ ಮಧ್ಯಪ್ರವೇಶಿಸಬೇಕು ಎಂದು ಕೇರಳ ಕಾರ್ಯನಿರತ ಪತ್ರಕರ್ತರ ಸಂಘವು ಆಗ್ರಹಿಸಿತ್ತು.

ADVERTISEMENT

ಹಾಥರಸ್‌ನಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಹಾಗೂ ಸಾವಿನ ಪ್ರಕರಣದ ಕುರಿತು ವರದಿ ಮಾಡಲು ತೆರಳುತ್ತಿದ್ದ ಸಿದ್ದಿಕಿ ಸೇರಿದಂತೆ ಮೂವರನ್ನು ಉತ್ತರ ಪ್ರದೇಶ ಪೊಲೀಸರು ಕಳೆದ ವಾರ ಬಂಧಿಸಿದ್ದರು. ಇವರಿಗೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಜೊತೆ ಸಂಪರ್ಕವಿದೆ ಎನ್ನುವ ಆರೋಪದಡಿ ಯುಎಪಿಎಯಡಿ ಕಠಿಣ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.