ಮುಂಬೈ: ’ನಮ್ಮ ಸರ್ಕಾರದ ನೂತನ ಕೃಷಿ ಮಸೂದೆಗಳು ರೈತರನ್ನು ’ಅನ್ನದಾತ’ನ ಪಾತ್ರದಿಂದ ಉದ್ಯಮಶೀಲತೆಯತ್ತ ಕೊಂಡೊಯ್ದು, ಅವರ ಆದಾಯವನ್ನು ಹೆಚ್ಚಿಸಲಿವೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ವಿಡಿಯೊ ಕಾನ್ಫರೆನ್ಸ್ ಮೂಲಕಮಂಗಳವಾರ ಕೇಂದ್ರದ ಮಾಜಿ ಸಚಿವ ಬಾಲಾಸಾಹೇಬ್ ವಿಖೆ ಪಾಟೀಲ್ ಅವರ ಆತ್ಮಚರಿತ್ರೆ ಬಿಡುಗಡೆಗೊಳಿಸಿ, ಅಹಮದ್ನಗರ ಜಿಲ್ಲೆಯ ಪ್ರವರ ಗ್ರಾಮೀಣ ಶಿಕ್ಷಣ ಸೊಸೈಟಿಗೆ ಮರುನಾಮಕರಣ ಮಾಡಿದ ನಂತರ ಅವರು ಮಾತನಾಡಿದರು.
’ಗುಜರಾತ್, ಮಹಾರಾಷ್ಟ್ರ, ಹರಿಯಾಣ ಮತ್ತು ಪಂಜಾಬ್ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾಲು, ಸಕ್ಕರೆ ಮತ್ತು ಗೋಧಿ ಉತ್ಪಾದನೆ ಉಲ್ಲೇಖಿಸಿದ ಮೋದಿ ಅವರು, ’ ಇಂಥ ಸ್ಥಳೀಯ ಉದ್ಯಮ ಮಾದರಿಗಳು ದೇಶವನ್ನು ಮುಂದೆ ಕೊಂಡೊಯ್ಯುತ್ತವೆ’ ಎಂದು ಹೇಳಿದರು.
’ಸ್ವಾತಂತ್ರ್ಯದ ನಂತರ ದೇಶದಲ್ಲಿ ಸಾಕಷ್ಟು ಆಹಾರ ಸಂಗ್ರಹವಿರಲಿಲ್ಲ. ಆಗ ಸರ್ಕಾರ ಆಹಾರ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಿತ್ತು. ಆ ಸಮಯದಲ್ಲಿ ರೈತರು ಆಹಾರ ಉತ್ಪಾದನೆಯತ್ತ ಹೆಚ್ಚು ಗಮನ ಹರಿಸಿದ್ದರು. ರೈತರು ಆಹಾರ ಉತ್ಪಾದನೆಯತ್ತ ಕಾಳಜಿವಹಿಸಿದ್ದಾಗ, ಸರ್ಕಾರಗಳು ರೈತರ ಆದಾಯ ಹೆಚ್ಚಿಸುವಂತಹ ನೀತಿ ರೂಪಿಸಲಿಲ್ಲ. ಜನರೂ, ರೈತರ ಆದಾಯದ ಬಗ್ಗೆ ಯೋಚಿಸುವುದನ್ನು ಮರೆತರು. ಮೊದಲ ಬಾರಿಗೆ ಈ ಆಲೋಚನೆಯನ್ನು ಬದಲಾಯಿಸಿದ್ದೇವೆ’ ಎಂದು ರೈತರ ಕಲ್ಯಾಣಕ್ಕಾಗಿ ಕೇಂದ್ರ ಕೈಗೊಂಡ ಕ್ರಮಗಳನ್ನು ಪ್ರಧಾನಿ ಪಟ್ಟಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.