ADVERTISEMENT

ಪಂಜಾಬ್‌ನಲ್ಲಿ ರೈಲ್‌ ರೋಕೋ ಪ್ರತಿಭಟನೆ: ಕೇಂದ್ರದ ವಿರುದ್ಧ ರೈತ ಸಂಘಟನೆಗಳ ಆಕ್ರೋಶ

ಪಿಟಿಐ
Published 28 ಸೆಪ್ಟೆಂಬರ್ 2023, 13:26 IST
Last Updated 28 ಸೆಪ್ಟೆಂಬರ್ 2023, 13:26 IST
ಅಮೃತಸರದಲ್ಲಿ ಗುರುವಾರ ಪಂಜಾಬ್ ಮಜ್ದೂರ್ ಸಂಘರ್ಷ ಸಮಿತಿಯ ಕಾರ್ಯಕರ್ತರು ರೈಲು ಹಳಿಗಳ ಮೇಲೆ ಕುಳಿತು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು    ಪಿಟಿಐ ಚಿತ್ರ
ಅಮೃತಸರದಲ್ಲಿ ಗುರುವಾರ ಪಂಜಾಬ್ ಮಜ್ದೂರ್ ಸಂಘರ್ಷ ಸಮಿತಿಯ ಕಾರ್ಯಕರ್ತರು ರೈಲು ಹಳಿಗಳ ಮೇಲೆ ಕುಳಿತು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು    ಪಿಟಿಐ ಚಿತ್ರ   

ಅಮೃತ್‌ಸರ : ಉತ್ತರ ಭಾರತದಲ್ಲಿ ಪ್ರವಾಹದಿಂದಾದ ನಷ್ಟಕ್ಕೆ ಆರ್ಥಿಕ ಪ್ಯಾಕೇಜ್‌ ನೀಡಬೇಕು, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಗೆ ಶಾಸನಾತ್ಮಕ ಗ್ಯಾರಂಟಿ ಹಾಗೂ ಕೃಷಿಕರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಂಜಾಬ್‌ನ ವಿವಿಧೆಡೆ ರೈತರು ಗುರುವಾರ ‘ರೈಲ್‌ ರೋಕೋ’ ಚಳವಳಿ ಆರಂಭಿಸಿದರು.

ಅಮೃತ್‌ಸರ ಹಾಗೂ ದೇವಿದಾಸಪುರದಲ್ಲಿ ಅಮೃತ್‌ಸರ–ದೆಹಲಿ ನಡುವಿನ ರೈಲು ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸೆ.30ರವರೆಗೂ ‘ರೈಲ್‌ ರೋಕೋ’ ಚಳವಳಿ ನಡೆಸುವುದಾಗಿ ಹೇಳಿದರು.

‘ಉತ್ತರ ಭಾರತದ ರಾಜ್ಯಗಳಿಗೆ ₹ 50 ಸಾವಿರ ಕೋಟಿ ಪರಿಹಾರ ಪ್ಯಾಕೇಜ್‌ ನೀಡಬೇಕು. ಸ್ವಾಮಿನಾಥನ್‌ ಆಯೋಗದ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು’ ಎಂದು ಅಮೃತಸರದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತ ಮುಖಂಡ ಗುರುಬಚನ್‌ ಸಿಂಗ್‌ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ADVERTISEMENT

‘ರೈತರು ಮತ್ತು ಕಾರ್ಮಿಕರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಇದೀಗ ರದ್ದುಗೊಂಡಿರುವ ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧದ ಆಂದೋಲನದಲ್ಲಿ ಮೃತಪಟ್ಟ ಪ್ರತಿ ರೈತನ ಕುಟುಂಬಕ್ಕೆ ₹ 10 ಲಕ್ಷ ಪರಿಹಾರ ಕೊಡಬೇಕು ಹಾಗೂ ಆ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ಕಿಸಾನ್‌ ಮಜ್ದೂರ್‌ ಸಂಘರ್ಷ ಸಮಿತಿ, ಭಾರತಿ ಕಿಸಾನ್‌ ಯೂನಿಯನ್‌ (ಕ್ರಾಂತಿಕಾರಿ), ಬಿಜೆಯು (ಏಕ್ತಾ ಆಜಾದ್‌), ಆಜಾದ್‌ ಕಿಸಾನ್‌ ಸಮಿತಿ ದೋಬಾ, ಬಿಕೆಯು (ಬೆಹ್ರಾಮ್ಕೆ), ಬಿಕೆಯು (ಶಹೀದ್‌ ಭಗತ್‌ ಸಿಂಗ್), ಬಿಕೆಯು (ಚೋಟ್ಟು ರಾಮ್) ಸೇರಿದಂತೆ ವಿವಿಧ ರೈತಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.