ADVERTISEMENT

ದ್ವೇಷ ಭಾಷಣ: ಕ್ರಮ ಕೈಗೊಳ್ಳದ ಕೇಂದ್ರದ ವಿರುದ್ಧ ಫಾರೂಕ್‌ ಅಬ್ದುಲ್ಲಾ ಕಿಡಿ

ಮುಸ್ಲಿಮರ ನರಮೇಧಕ್ಕೆ ಬಲಪಂಥೀಯ ಸಂಘಟನೆಗಳ ಕರೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 15:48 IST
Last Updated 13 ಜನವರಿ 2022, 15:48 IST
ಫಾರೂಕ್‌ ಅಬ್ದುಲ್ಲಾ
ಫಾರೂಕ್‌ ಅಬ್ದುಲ್ಲಾ   

ಶ್ರೀನಗರ: ದೇಶದಲ್ಲಿನ ಮುಸ್ಲಿಂ ಹಾಗೂ ಇತರೆ ಅಲ್ಪಸಂಖ್ಯಾತ ಸಮುದಾಯಗಳ ನರಮೇಧಕ್ಕೆ ಕರೆ ನೀಡಿರುವ ಬಲಪಂಥೀಯ ಸಂಘಟನೆಗಳ ವಿರುದ್ಧ ನ್ಯಾಷನಲ್‌ ಕಾನ್ಫರೆನ್ಸ್ ಅಧ್ಯಕ್ಷ ಹಾಗೂ ಸಂಸದ ಫಾರೂಕ್‌ ಅಬ್ದುಲ್ಲಾ ಕಿಡಿಕಾರಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ದ್ವೇಷ ಭಾಷಣಗಳ ಸಮಾವೇಶಗಳಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ವಿಷವನ್ನು ಕಾರುತ್ತಿದ್ದಾರೆ. ಇಂತಹವರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಕಳೆದ ಡಿ.17ರಿಂದ 19ರವರೆಗೆ ಹರಿದ್ವಾರದ ಸಮಾವೇಶವೊಂದರಲ್ಲಿ ಬಲಪಂಥೀಯ ಸಂಘಟನೆಗಳು ಕರೆಕೊಟ್ಟ ಹೇಳಿಕೆಗಳು ಬಹಳ ಆಘಾತಕಾರಿಕಾರಿಯಾಗಿದೆ. ದೇಶದಲ್ಲಿ ಮುಸ್ಲಿಮರ ವಿರುದ್ಧ ಪದೇ ಪದೇ ಇಂತಹ ಬಹಿರಂಗ ಹೇಳಿಕೆ ಹಾಗೂ ಕರೆಗಳು ಬಹಳ ಆತಂಕವನ್ನು ಉಂಟು ಮಾಡಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಮುಸ್ಲಿಂ ಹಾಗೂ ಇತರೆ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಬಲಪಂಥೀಯ ಸಂಘಟನೆಗಳು ದ್ವೇಷ ಭಾಷಣ ಮಾಡುತ್ತಿದ್ದರೂ ಕೇಂದ್ರ ಸರ್ಕಾರ ಕುರುಡಾಗಿದೆ. ಸರ್ಕಾರದ ಈ ಮೌನವು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಕುರಿತು ಸರ್ಕಾರ ಶೀಘ್ರವೇ ಉತ್ತರಿಸಬೇಕು’ ಎಂದು ಒತ್ತಾಯಿಸಿದರು.

‘ನರಮೇಧ ಅಪರಾಧ ತಡೆ ಹಾಗೂ ಶಿಕ್ಷೆ(ಸಿಪಿಪಿಸಿಜಿ)’ ಕುರಿತ ಒಪ್ಪಂದಕ್ಕೆ ಭಾರತವು ಸಹಿ ಹಾಕಿದ್ದು, ಈ ಒಪ್ಪಂದ ಕಲಂ 3 ಸಿ ಅಡಿ ಪ್ರಕಾರ ನೇರ ಹಾಗೂ ಸಾರ್ವಜನಿಕವಾಗಿ ಮುಸ್ಲಿಮರ ನರಮೇಧಕ್ಕೆ ಕರೆ ಕೊಡುವುದು ಅಪರಾಧವಾಗುತ್ತದೆ. ದೇಶದ ಐಕ್ಯತೆ ಹಾಗೂ ಶಾಂತಿ ಸುವ್ಯವಸ್ಥೆಗೆ ವಿರುದ್ಧವಾದ ಇಂತಹ ಹೇಳಿಕೆಗಳ ವಿರುದ್ಧ ಭಾರತದ ಕಾನೂನು ವ್ಯವಸ್ಥೆಯಡಿ ಪ್ರಕರಣ ದಾಖಲಿಸಿ ಶಿಕ್ಷೆಗೆ ಗುರಿಪಡಿಸಬಹುದು’ ಎಂದು ಅವರು ವಿವರಿಸಿದರು.

‘ನರಮೇಧಕ್ಕೆ ಕರೆ ಕೊಟ್ಟರೂ ದೇಶದ ‍ಪ್ರಧಾನಿ ಮೌನ ವಹಿಸಿರುವುದು ಕೋಮು ಪ್ರಚೋದಕರಿಗೆ ಧೈರ್ಯವನ್ನು ತುಂಬಿದಂತಾಗಿದೆ. ಇದರಿಂದ ದೇಶದ ಅಲ್ಪಸಂಖ್ಯಾತ ಸಮುದಾಯವನ್ನು ಮತ್ತಷ್ಟು ದೂರ ಸರಿಸದಂತಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.