ADVERTISEMENT

ಆಹಾರ ನಿಗಮ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ: ಪಂಜಾಬ್‌ನ ವಿವಿಧೆಡೆ ಸಿಬಿಐ ಶೋಧ

ಪಿಟಿಐ
Published 21 ಫೆಬ್ರುವರಿ 2023, 11:04 IST
Last Updated 21 ಫೆಬ್ರುವರಿ 2023, 11:04 IST
.
.   

ನವದೆಹಲಿ (ಪಿಟಿಐ): ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪಂಜಾಬ್‌ನ 30 ಕಡೆಗಳಲ್ಲಿ ಸಿಬಿಐ ಮಂಗಳವಾರ ಶೋಧ ಕಾರ್ಯಾಚರಣೆ ನಡೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಆಪರೇಷನ್‌ ಕನಕ್ 2’ ಕಾರ್ಯಾಚರಣೆ ಭಾಗವಾಗಿ ಆಹಾರ ಧಾನ್ಯಗಳ ವರ್ತಕರು, ಅಕ್ಕಿ ಗಿರಣಿ ಮಾಲೀಕರು ಮತ್ತು ಎಫ್‌ಸಿಐನ ಹಾಲಿ ಮತ್ತು ನಿವೃತ್ತ ಅಧಿಕಾರಿಗಳ ನಿವಾಸಗಳಲ್ಲಿ ಶೋಧ ನಡೆಸಲಾಯಿತು. ರಾಜ್‌ಪುರ, ಪಟಿಯಾಲ, ಫತೇಹ್‌ಗಢ ಸಾಹಿಬ್‌, ಸರ್‌ಹಿಂದ್‌, ಮೊಹಾಲಿ, ಮೊಗ, ಫಿರೋಜ್‌ಪುರ, ಲೂಧಿಯಾನ, ಸಂಗ್ರೂರು ಮತ್ತಿತರ ಪ್ರದೇಶಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು ಎಂದು ಹೇಳಿದರು.

ಕಳಪೆ ಗುಣಮಟ್ಟದ ಆಹಾರ ಧಾನ್ಯವನ್ನು ಎಫ್‌ಸಿಐಗೆ ವಿತರಿಸಲು ಖಾಸಗಿ ಗಿರಣಿಗಳಿಂದ ಪ್ರತಿ ಟ್ರಕ್‌ಗೆ ₹1000–4000 ಲಂಚ ಪಡೆಯುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಕೈಗೊಂಡ ಎರಡನೇ ಶೋಧ ಕಾರ್ಯಾಚರಣೆ ಇದಾಗಿದ್ದು, ಜ.13ರಂದು ಮೊದಲ ಸುತ್ತಿನ ಶೋಧ ನಡೆಸಲಾಗಿತ್ತು.

ADVERTISEMENT

ಪ್ರಕರಣ ಸಂಬಂಧಿಸಿದಂತೆ ಎಫ್‌ಸಿಐ ಕಾರ್ಯನಿರ್ವಾಹಕ ನಿರ್ದೇಶಕ ಸುದೀಪ್ ಸಿಂಗ್ ಸೇರಿದಂತೆ ಒಟ್ಟು 74 ಆರೋಪಿಗಳ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿದೆ. ಈ ಪೈಕಿ 34 ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಮೂವರು ನಿವೃತ್ತರು, 17 ಖಾಸಗಿ ವ್ಯಕ್ತಿಗಳು ಮತ್ತು 20 ಸಂಸ್ಥೆಗಳು ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.