ಮುಂಬೈ: ಸುಲಿಗೆ ಆರೋಪದ ಮೇಲೆ ಹಿರಿಯ ಐಪಿಎಸ್ ಅಧಿಕಾರಿ ಪರಮ್ಬೀರ್ಸಿಂಗ್, ಮೂವರು ಪೊಲೀಸ್ ಸಿಬ್ಬಂದಿ ಮತ್ತು ಮತ್ತಿಬ್ಬರು ವ್ಯಕ್ತಿಗಳ ವಿರುದ್ಧ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದರು.
‘ತಮ್ಮ ವಿರುದ್ಧ ದಾಖಲಾಗಿದ್ದ ದೂರನ್ನು ಹಿಂದಕ್ಕೆ ಪಡೆಯಲು ₹15 ಕೋಟಿಗೆ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿ ಬಿಲ್ಡರ್ ನೀಡಿದ ದೂರಿನ ಮೇಲೆ, ದಕ್ಷಿಣ ಮುಂಬೈನ ಮೆರೈನ್ ಡ್ರೈವ್ ಪೊಲೀಸ್ ಠಾಣೆಯಲ್ಲಿ ಈ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ‘ ಎಂದು ಅವರು ತಿಳಿಸಿದ್ದಾರೆ. ಆದರೆ, ಪ್ರಕರಣದ ಬಗ್ಗೆ ಹೆಚ್ಚಿನ ವಿವರ ನೀಡಲಿಲ್ಲ.
ಈ ಪ್ರಕರಣದಲ್ಲಿ, ಸುನೀಲ್ ಜೈನ್ ಮತ್ತು ಸಂಜಯ್ ಪುನಾಮಿಯಾ ಎಂಬ ಇಬ್ಬರು ಪಾಲುದಾರ ಬಿಲ್ಡರ್ಗಳನ್ನು ಬಂಧಿಸಲಾಗಿದೆ. ದೂರಿನ ಪ್ರಕಾರ, ಜೈನ್ ಮತ್ತು ಪುನಾಮಿಯಾ, ಪೊಲೀಸರೊಂದಿಗೆ ಸೇರಿ ಸಂಚು ರೂಪಿಸಿ, ಬಿಲ್ಡರ್ ವಿರುದ್ಧ ದಾಖಲಾಗಿದ್ದ ದೂರನ್ನು ಹಿಂಪಡೆಯಲು ಆತನಿಂದ ₹15 ಕೋಟಿಗೆ ಬೇಡಿಕೆ ಇಟ್ಟಿದ್ದರು‘ ಎಂದು ಮೂಲಗಳು ತಿಳಿಸಿವೆ.
ಬಿಲ್ಡರ್ ತನ್ನ ದೂರಿನಲ್ಲಿ, ‘ಮಾಜಿ ಮುಂಬೈ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಜತೆಗೆ, ಇತರೆ ಐವರ ಹೆಸರುಗಳನ್ನು ಉಲ್ಲೇಖಿಸಿದ್ದಾನೆ‘ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಸಮೀಪ ವಾಹನವೊಂದರಲ್ಲಿ ಸ್ಪೋಟಕ ಪತ್ತೆ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ಪರಮ್ಬೀರ್ ಸಿಂಗ್ ಅವರನ್ನು ಮುಂಬೈ ಪೊಲೀಸ್ ಆಯುಕ್ತ ಹುದ್ದೆಯಿಂದ ಗೃಹ ರಕ್ಷಕ ದಳದ ಡಿ.ಜಿಯಾಗಿ ವರ್ಗಾಯಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.