ADVERTISEMENT

ಕೊಯಮತ್ತೂರಿನಲ್ಲಿ ನಡೆದಿದ್ದ ಕಾರು ಸ್ಫೋಟ ಪ್ರಕರಣದಲ್ಲಿ ಐವರ ಬಂಧನ

ಪಿಟಿಐ
Published 25 ಅಕ್ಟೋಬರ್ 2022, 5:05 IST
Last Updated 25 ಅಕ್ಟೋಬರ್ 2022, 5:05 IST
ಕಾರಿಗೆ ಹೊತ್ತಿದ್ದ ಬೆಂಕಿ ನಂದಿಸುತ್ತಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ
ಕಾರಿಗೆ ಹೊತ್ತಿದ್ದ ಬೆಂಕಿ ನಂದಿಸುತ್ತಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ    

ಕೊಯಮತ್ತೂರು (ತಮಿಳುನಾಡು): ಕೊಯಮತ್ತೂರಿನ ಉಕ್ಕಡಂ ದೇವಾಲಯದ ಬಳಿ ನಡೆದಿದ್ದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ನಡೆದಿದ್ದ ಸ್ಫೋಟದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದರು.

ಜೆಮಿಶಾ ಮುಬೀನ್ ಅವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಭಾನುವಾರ ಮುಂಜಾನೆ ಸಿಲಿಂಡರ್‌ ಸ್ಫೋಟವಾಗಿತ್ತು. ಈ ವೇಳೆ ಮುಬೀನ್‌ ಮೃತಪಟ್ಟಿದ್ದರು. ಬಾಂಬ್‌ಗಳನ್ನು ತಯಾರಿಸಲು ಬಳಸುವ ಪೊಟ್ಯಾಸಿಯಮ್ ನೈಟ್ರೇಟ್‌ನಂತಹ ವಸ್ತುಗಳು ಕಾರಿನಲ್ಲಿ ಪತ್ತೆಯಾಗಿದ್ದವು.

ಘಟನೆಯ ಕುರಿತು ಉಕ್ಕಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಮುಹಮ್ಮದ್ ತಲ್ಕಾ, ಮುಹಮ್ಮದ್ ಅಜರುದ್ದೀನ್, ಮುಹಮ್ಮದ್ ರಿಯಾಜ್, ಫಿರೋಜ್ ಇಸ್ಮಾಯಿಲ್ ಮತ್ತು ಮುಹಮ್ಮದ್ ನವಾಜ್ ಇಸ್ಮಾಯಿಲ್ ಎಂದು ಅವರನ್ನು ಗುರುತಿಸಲಾಗಿದೆ. ಅವರೆಲ್ಲರೂ 20 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಆದರೆ, ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ಪೊಲೀಸರು ನಿರಾಕರಿಸಿದ್ದಾರೆ. ಇದು ಭಯೋತ್ಪದನಾ ಕೃತ್ಯ ಅಲ್ಲ ಎಂದು ಪೊಲೀಸರು ಈಗಾಗಲೇ ಹೇಳಿದ್ದಾರೆ.

ಶ್ರೀಲಂಕಾದಲ್ಲಿ ಈಸ್ಟರ್‌ ದಿನದಂದು ನಡೆದಿದ್ದ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮೃತ ಮುಬಿನ್‌ ಸೇರಿದಂತೆ ಐದು ಮಂದಿಯನ್ನು 2019ರಲ್ಲಿ ರಾಷ್ಟ್ರೀಯ ತನಿಖಾ ದಳ ವಿಚಾರಣೆಗೆ ಒಳಪಡಿಸಿತ್ತು. ಸಿಲಿಂಡರ್‌ ಸ್ಫೋಟದ ಬಳಿಕ ಪೊಲೀಸರು ಮುಬಿನ್‌ ಮನೆಯಲ್ಲಿ ಶೋಧ ನಡೆಸಿದಾಗ ಸ್ಫೋಟಕ ವಸ್ತುಗಳು ಲಭಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.