ADVERTISEMENT

ಅಸ್ಸಾಂ: ಸಂಕಷ್ಟದಲ್ಲಿ 7.18 ಲಕ್ಷ ಜನ

ಪ್ರವಾಹ: ಮೃತರ ಸಂಖ್ಯೆ 10ಕ್ಕೆ ಏರಿಕೆ l 1,413 ಗ್ರಾಮಗಳು ಜಲಾವೃತ

ಪಿಟಿಐ
Published 19 ಮೇ 2022, 19:31 IST
Last Updated 19 ಮೇ 2022, 19:31 IST
ತ್ರಿಪುರಾದ ರಾಜಧಾನಿ ಅಗರ್ತಲಾದಲ್ಲಿ ಗುರುವಾರ ಸುರಿದ ಭಾರಿ ಮಳೆಯಿಂದಾಗಿ ಜಲಾವೃತಗೊಂಡಿರುವ ರಸ್ತೆಯಲ್ಲಿ ಜನರು ಸುರಕ್ಷಿತ ಸ್ಥಳದತ್ತ ತೆರಳಿದರು        –ಪಿಟಿಐ ಚಿತ್ರ
ತ್ರಿಪುರಾದ ರಾಜಧಾನಿ ಅಗರ್ತಲಾದಲ್ಲಿ ಗುರುವಾರ ಸುರಿದ ಭಾರಿ ಮಳೆಯಿಂದಾಗಿ ಜಲಾವೃತಗೊಂಡಿರುವ ರಸ್ತೆಯಲ್ಲಿ ಜನರು ಸುರಕ್ಷಿತ ಸ್ಥಳದತ್ತ ತೆರಳಿದರು        –ಪಿಟಿಐ ಚಿತ್ರ   

ಗುವಾಹಟಿ/ಇಟಾನಗರ/ಅಗರ್ತಲಾ: ಅಸ್ಸಾಂನಲ್ಲಿ ಪ್ರವಾಹದಿಂದ ಪರಿಸ್ಥಿತಿ ಹದಗೆಟ್ಟಿದ್ದು, ತೊಂದರೆಗೆ ಒಳಗಾದವರ ಸಂಖ್ಯೆ ಗುರುವಾರ 7.18 ಲಕ್ಷಕ್ಕೆ ಏರಿಕೆಯಾಗಿದೆ. ದರ್ರಾಂಗ್‌ ಜಿಲ್ಲೆಯಲ್ಲಿ ವ್ಯಕ್ತಿಯೊ
ಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ಪ್ರವಾಹಕ್ಕೆ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಪ್ರಸ್ತುತ ರಾಜ್ಯದಲ್ಲಿ 1,413 ಗ್ರಾಮಗಳು ಜಲಾವೃತವಾಗಿವೆ. ನಾಗಾಂವ್‌ ಜಿಲ್ಲೆ ಅತಿ ಹೆಚ್ಚು ಹಾನಿಗೊಳಗಾಗಿದ್ದು, ಇಲ್ಲಿನ 2.88 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರವಾಹದಿಂದ ರಾಜ್ಯದಲ್ಲಿ 46,160 ಹೆಕ್ಟೇರ್ ಬೆಳೆ ಪ್ರದೇಶ ಮುಳುಗಡೆಯಾಗಿದೆ. ಹಲವೆಡೆ ಭೂ ಕುಸಿತ ಸಂಭವಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.ರಾಜ್ಯದ 14 ಜಿಲ್ಲೆಗಳಲ್ಲಿ 248 ಪರಿಹಾರ ಶಿಬಿರಗಳನ್ನು ನಡೆಸಲಾಗುತ್ತಿದ್ದು, ಅಲ್ಲಿ 6,911 ಮಕ್ಕಳು ಸೇರಿದಂತೆ 48,304 ಜನರು ಆಶ್ರಯ ಪಡೆದಿದ್ದಾರೆ.

ADVERTISEMENT

ನೆರೆಯ ಅರುಣಾಚಲ ಪ್ರದೇಶದಲ್ಲೂ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೆಲವೆಡೆ ಭೂ ಕುಸಿತ ಸಂಭವಿಸಿದೆ. ಕೆಲ ಜಿಲ್ಲೆಗಳಲ್ಲಿ ಪ್ರವಾಹದ ಪರಿಸ್ಥಿತಿಯೂ ಉಂಟಾಗಿದೆ. ಇಟಾ
ನಗರದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹದಿಂದಾಗಿ ತ್ರಿಪುರಾದಲ್ಲಿ ರೈಲ್ವೆ ಸೇವೆಗಳು ಸ್ಥಗಿತಗೊಂಡಿರುವ ಕಾರಣ, ಅಗತ್ಯ ವಸ್ತುಗಳ ಪೂರೈಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಅಗತ್ಯ ವಸ್ತುಗಳ ತುರ್ತು ಸಾಗಣೆಗೆ ಪರ್ಯಾಯ ಮಾರ್ಗಗಳಾದ ಹಲ್ಡಿಯಾ– ಚಿತ್ತಗಾಂಗ್‌–ಅಖೌರಾ-ಅಗರ್ತಲಾ ಮಾರ್ಗ ಬಳಸಲು ರಾಜ್ಯ ಸರ್ಕಾರ ಯೋಜಿಸಿದೆ.

ಅಸ್ಸಾಂ– ಅಗರ್ತಲಾ ರಾಷ್ಟ್ರೀಯ ಹೆದ್ದಾರಿ ಬುಧವಾರ ವಾಹನ ಸಂಚಾರಕ್ಕೆ ಮುಕ್ತವಾಗಿರುವುದರಿಂದ ಗುವಾಹಟಿ ಮತ್ತು ಸಿಲ್ಚಾರ್‌ ಕಡೆಯಿಂದ ರಾಜ್ಯಕ್ಕೆ ಪೆಟ್ರೋಲ್‌ ಮತ್ತು ಡೀಸೆಲ್‌ ಬರಲಾರಂಭಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.