ಶ್ರೀನಗರ:ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಸೇರಿದಂತೆ ನಾಲ್ಕು ಜನರ ತಂಡಕ್ಕೆ ಶ್ರೀನಗರ ಪ್ರವೇಶಿಸಲು ಇಂದು ಅನುಮತಿ ನೀಡಲಾಗಿದೆ.
ಸೆಪ್ಟೆಂಬರ್ನಲ್ಲಿ ಶ್ರೀನಗರ ವಿಮಾನ ನಿಲ್ದಾಣದಲ್ಲಿಯೇ ಸಿನ್ಹಾ ಅವರನ್ನು ತಡೆದಿದ್ದ ಜಮ್ಮು–ಕಾಶ್ಮೀರ ಆಡಳಿತವು ಅವರಿಗೆ ಪ್ರವೇಶ ನಿರಾಕರಿಸಿತ್ತು. ಇಂದು ಸಿನ್ಹಾ ಅವರ ಜೊತೆ ಮಾಜಿ ಅಧಿಕಾರಿ ವಜಾಹತ್ ಅಭಿಬುಲ್ಹಾ, ಪತ್ರಕರ್ತ ಭರತ್ ಭೂಷಣ್ ಮತ್ತು ಸಾಮಾಜಿಕ ಕಾರ್ಯಕರ್ತ ಕಪಿಲ್ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇಂದು ಬೆಳಗ್ಗೆ ಯಶವಂತ್ ಸಿನ್ಹಾ ಅವರು ಶ್ರೀನಗರಕ್ಕೆ ಹೋಗುತ್ತಿರುವುದಾಗಿ ಟ್ವೀಟ್ ಮಾಡಿದ್ದರು. ‘ನಾವೀಗ ಶ್ರೀನಗರ ದಾರಿಯಲ್ಲಿದ್ದೇವೆ. ಕಾಶ್ಮೀರದ ಬಗ್ಗೆ ಕಾಳಜಿ ಹೊಂದಿರುವ ನಾಲ್ಕು ಜನರ ಗುಂಪು ಅಲ್ಲಿನ ನೈಜ ಸ್ಥಿತಿಯ ಬಗ್ಗೆ ಸ್ವತಂತ್ರವಾಗಿ ಮೌಲ್ಯಮಾಪನ ಮಾಡಲಿದೆ. ಸರ್ಕಾರದ ಕ್ರಮದಿಂದ ಕಣಿವೆಯಲ್ಲಿ ಆಗಿರುವ ಆರ್ಥಿಕ ಹಾನಿಯ ಬಗ್ಗೆ ತಿಳಿದುಕೊಳ್ಳಲಿದೆ. ಕಾಶ್ಮೀರಕ್ಕೆ ನಮಗೆ ಪ್ರವೇಶ ನೀಡುವ ಭರವಸೆ ಇದೆ,’ ಎಂದು ಟ್ವೀಟ್ ಮೂಲಕ ಹೇಳಿದ್ದರು.
ತಂಡವು ನಾಲ್ಕು ದಿನಗಳ ಕಾಲ ಜಮ್ಮು–ಕಾಶ್ಮೀರದ ಭೇಟಿಯಲ್ಲಿದ್ದು, ಕೇಂದ್ರ ಸರ್ಕಾರವು 370 ವಿಧಿಯನ್ನು ತೆರವುಗೊಳಿಸಿದ ನಂತರ ಅಲ್ಲಿನ ನೈಜ ಸ್ಥಿತಿ ಹೇಗಿದೆ ಎಂದು ಅರಿಯಲಿದೆ.
ಸಿನ್ಹಾ ನೇತೃತ್ವದ ತಂಡವು ಕಣಿವೆಯಲ್ಲಿಂದುಸ್ಥಳೀಯರನ್ನು ಭೇಟಿ ಮಾಡಲಿದೆ. ಗೃಹ ಬಂಧನದಲ್ಲಿರುವ ಜಮ್ಮ–ಕಾಶ್ಮೀರದ ರಾಜಕೀಯ ನಾಯಕರನ್ನು ಭೇಟಿ ಮಾಡಲು ತಂಡವು ನಾಳೆಯಿಂದ ಪ್ರಯತ್ನಿಸಲಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.