ಹೈದರಾಬಾದ್ (ಪಿಟಿಐ): ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಫಾರ್ಮುಲಾ-ಇ ರೇಸ್ನಲ್ಲಿ ಹಣಕಾಸು ಅಕ್ರಮಗಳನ್ನು ನಡೆಸಿರುವ ಆರೋಪದ ಮೇಲೆ ಬಿಆರ್ಎಸ್ ಕಾರ್ಯಾಧ್ಯಕ್ಷ ಮತ್ತು ಶಾಸಕ ಕೆ.ಟಿ. ರಾಮರಾವ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಗುರುವಾರ ಎಫ್ಐಆರ್ ದಾಖಲಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ರಾಮರಾವ್ ವಿರುದ್ಧ ಪ್ರಕರಣ ದಾಖಲಿಸಲು ತೆಲಂಗಾಣ ರಾಜ್ಯಪಾಲ ಜಿಷ್ಣು ದೇವ್ ವರ್ಮಾ ಅವರು ಇತ್ತೀಚೆಗೆ ಅನುಮತಿ ನೀಡಿದ್ದರು.
ರಾಮರಾವ್ ಮತ್ತು ಇಬ್ಬರು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ.
ರಾಮರಾವ್ ಅವರು ತಮ್ಮ ವಿರುದ್ಧದ ಪ್ರಕರಣಗಳನ್ನು ಕಾನೂನಾತ್ಮಕವಾಗಿ ಎದುರಿಸುವುದಾಗಿ ಮಂಗಳವಾರವಷ್ಟೇ ಹೇಳಿದ್ದರು.
ಕಾಂಗ್ರೆಸ್ ಸರ್ಕಾರವು ರಾಮರಾವ್ ವಿರುದ್ಧ ಹಲವು ತಿಂಗಳಿಂದ ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ ಎಂದು ಆರೋಪಿಸಿರುವ ಬಿಆರ್ಎಸ್ ಪಕ್ಷವು, ಹಿಂದಿನ ಸರ್ಕಾರವು ತೆಲಂಗಾಣಕ್ಕೆ ಅನುಕೂಲವಾಗುವಂತೆ ಫಾರ್ಮುಲಾ-ಇ ರೇಸ್ ಸಂಘಟಕರೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಹೇಳಿದೆ.
‘ಕೆ.ಟಿ ರಾಮರಾವ್ ಅವರು ಪೌರಾಡಳಿತ ಸಚಿವರಾಗಿದ್ದಾಗ, ಸೂಕ್ತ ನಿಯಮಗಳನ್ನು ಪಾಲಿಸದೇ ರೇಸ್ ಆಯೋಜಕರಿಗೆ ₹55 ಕೋಟಿ ವರ್ಗಾಯಿಸಲು ಅನುಮತಿ ನೀಡಿದ್ದಾರೆ’ ಎಂದು ಎಸಿಬಿ ಆರೋಪಿಸಿದೆ.
ರಾಮರಾವ್ ವಿರುದ್ಧ ಎಫ್ಐಆರ್ ದಾಖಲಿಸಲು ಅನುಮತಿ ಕೋರಿ ತೆಲಂಗಾಣ ಸರ್ಕಾರ ನವೆಂಬರ್ನಲ್ಲಿ ರಾಜ್ಯಪಾಲರಿಗೆ ಪತ್ರ ಬರೆದಿತ್ತು. ಎಸಿಬಿ ತನಿಖೆಗೆ ಪೌರಾಡಳಿತ ಇಲಾಖೆ ಒತ್ತಾಯಿಸಿತ್ತು. ಈ ವರ್ಷದ ಆರಂಭದಲ್ಲಿ, ಸರ್ಕಾರವು ಸಕ್ಷಮ ಪ್ರಾಧಿಕಾರದ ಅನುಮೋದನೆಯಿಲ್ಲದೆ ಫಾರ್ಮುಲಾ-ಇ ರೇಸ್ಗೆ ಸಂಬಂಧಿಸಿದ ಒಪ್ಪಂದ ಮಾಡಿಕೊಂಡು ₹55 ಕೋಟಿ ಪಾವತಿಸಿರುವ ಕುರಿತು ಹಿರಿಯ ಅಧಿಕಾರಿಯಿಂದ ವಿವರಣೆ ಕೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.