ಅಮರಾವತಿ: ಬಹಳ ದಿನಗಳಿಂದ ನಿರೀಕ್ಷಿಸಲಾಗುತ್ತಿದ್ದ ‘ಸ್ತ್ರೀ ಶಕ್ತಿ’ ಯೋಜನೆಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಶುಕ್ರವಾರ ಚಾಲನೆ ನೀಡಿದರು.
ಈ ಯೋಜನೆಯ ಮೂಲಕ ಆಂಧ್ರಪ್ರದೇಶದಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ರಾಜ್ಯ ಸರ್ಕಾರ ಒದಗಿಸುತ್ತಿದೆ.
ಚಂದ್ರಬಾಬು ನಾಯ್ಡು, ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ಸಚಿವ ನಾರಾ ಲೋಕೇಶ್ ಅವರು ಗುಂಟೂರು ಜಿಲ್ಲೆಯ ತಾಡೇಪಳ್ಳಿ ಮಂಡಲದಿಂದ ಮಹಿಳೆಯರೊಂದಿಗೆ ವಿಜಯವಾಡದ ಪಂಡಿತ ನೆಹರು ಬಸ್ ನಿಲ್ದಾಣದವರೆಗೆ ಪ್ರಯಾಣ ಮಾಡುವ ಮೂಲಕ ಉಚಿತ ಬಸ್ ಪ್ರಯಾಣಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ಮುಖ್ಯಮಂತ್ರಿ ಸೇರಿದಂತೆ ಪವನ್ ಕಲ್ಯಾಣ್, ನಾರಾ ಲೋಕೇಶ್ ಅವರು ಪ್ರಯಾಣದ ಸಮಯದಲ್ಲಿ ಮಹಿಳೆಯರೊಂದಿಗೆ ಮಾತನಾಡಿದರು.
ಉಂಡವಲ್ಲಿ ಗುಹೆಗಳಿನಿಂದ ಬಸ್ನಲ್ಲಿ ಪ್ರಯಾಣ ಆರಂಭಿಸಿ ಯೋಜನೆಗೆ ಚಾಲನೆ ನೀಡಿದರು. ಉಂಡವಲ್ಲಿ ಸೆಂಟರ್, ತಾಡೇಪಳ್ಳಿ ಪ್ಯಾಲೆಸ್, ತಾಡೇಪಳ್ಳಿ ಸೆಂಟರ್, ಕನಕದುರ್ಗ ವಾದ್ರಿಯ ಮೂಲಕ ಪ್ರಯಾಣಿಸಿದರು. ಬಸ್ನಲ್ಲಿ ಪ್ರಯಾಣ ಮಾಡುವ ಉದ್ದೇಶವಿದ್ದು, ವಿಜಯವಾಡ ಬಸ್ ಸ್ಟೇಷನ್ನಲ್ಲಿ ಧ್ವಜ ಪ್ರದರ್ಶಿಸಿ ಅಧಿಕೃತವಾಗಿ ಉಚಿತ ಬಸ್ ಸೇವೆಯನ್ನು ಪ್ರಾರಂಭಿಸಲಿದ್ದಾರೆ ಚಂದ್ರಬಾಬು.
ಮಹಿಳೆಯರಿಗೆ 5 ಬಗೆಯ ಬಸ್ಗಳಲ್ಲಿ ರಾಜ್ಯದಾದ್ಯಂತ ಉಚಿತ ಪ್ರಯಾಣದ ಸೌಕರ್ಯವನ್ನು ಕಲ್ಪಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಸಂಚರಿಸುವ ಸಾಮಾನ್ಯ ಬಸ್ಗಳು, ಅಲ್ಟ್ರಾ ಬಸ್ಗಳು, ಸಿಟಿ ಆರ್ಡಿನರಿ ಬಸ್ಗಳು, ಮೆಟ್ರೊ ಎಕ್ಸ್ಪ್ರೆಸ್ ಹಾಗೂ ಎಕ್ಸ್ಪ್ರೆಸ್ ಬಸ್ಗಳಲ್ಲಿ ಮಾತ್ರ ಆಂಧ್ರದಾದ್ಯಂತ ಪ್ರಯಾಣ ಮಾಡಬಹುದಾಗಿದೆ.
ಸರ್ಕಾರ ನೀಡಿರುವ ಆಧಾರ್, ರೇಷನ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿ, ಕಂಡಕ್ಟರ್ ನೀಡುವ ಶೂನ್ಯ ಶುಲ್ಕದ ಟಿಕೆಟ್ನೊಂದಿಗೆ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಬಾಲಕಿಯರು, ವಿದ್ಯಾರ್ಥಿನಿಯರು, ಮಹಿಳೆಯರು ಹಾಗೂ ತೃತೀಯಲಿಂಗಿಗಳು ಈ ಯೋಜನೆಯ ಲಾಭ ಪಡೆಯಬಹುದು ಎಂದು ಸರ್ಕಾರ ತಿಳಿಸಿದೆ.
ಸುಮಾರು 2.62 ಕೋಟಿ ಮಹಿಳೆಯರು ‘ಸ್ತ್ರೀ ಶಕ್ತಿ’ ಯೋಜನೆಯ ಲಾಭ ಪಡೆಯಲಿದ್ದಾರೆ. ಇದರಿಂದ ಆಂಧ್ರ ಸರ್ಕಾರಕ್ಕೆ ವರ್ಷಕ್ಕೆ ₹1,942 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.