ADVERTISEMENT

ಉಚಿತ ಕೊಡುಗೆಯಲ್ಲ, ಜನರ ಸಬಲೀಕರಣ ಮುಖ್ಯ: ಬಿಜೆಪಿ

ಪಿಟಿಐ
Published 27 ಅಕ್ಟೋಬರ್ 2022, 13:00 IST
Last Updated 27 ಅಕ್ಟೋಬರ್ 2022, 13:00 IST
   

ನವದೆಹಲಿ: ಮತದಾರರನ್ನು ಅವಲಂಬಿತರಾಗಿಸುವ ಬದಲು ಅವರ ಸಬಲೀಕರಣ ಹಾಗೂ ಸಾಮರ್ಥ್ಯ ವೃದ್ಧಿಗೆ ರಾಜಕೀಯ ಪಕ್ಷಗಳು ಒತ್ತು ನೀಡಬೇಕು ಎಂದು ಬಿಜೆಪಿ ಹೇಳಿದೆ. ಉಚಿತ ಕೊಡುಗೆಗಳು, ಕಲ್ಯಾಣ ಕಾರ್ಯಕ್ರಮಗಳ ನಡುವೆ ವ್ಯತ್ಯಾಸವಿದೆ ಎಂದು ಪ್ರತಿಪಾದಿಸಿದೆ.

ಚುನಾವಣಾ ಮಾದರಿ ನೀತಿ ಸಂಹಿತೆ ತಿದ್ದುಪಡಿ ಪ್ರಸ್ತಾವ ಕುರಿತು ಅಗತ್ಯ ಪ್ರತಿಕ್ರಿಯೆ ನೀಡಬೇಕು ಎಂಬ ಚುನಾವಣಾ ಆಯೋಗದ ಪತ್ರಕ್ಕೆ ನೀಡಿರುವ ಉತ್ತರದಲ್ಲಿ ಬಿಜೆಪಿ ಈ ಅಂಶವನ್ನು ಉಲ್ಲೇಖಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅಲ್ಲದೆ, ಚುನಾವಣೆ ಸಂದರ್ಭದಲ್ಲಿಮತದಾರರಿಗೆ ನೀಡುವ ಭರವಸೆಗಳಿಗೆ ಸಂಬಂಧಿಸಿದಂತೆ ಹಣಕಾಸಿನ ಬೆಂಬಲದ ಕಾರ್ಯಸಾಧ್ಯತೆ ಕುರಿತಂತೆಯೂ ರಾಜಕೀಯ ಪಕ್ಷಗಳು ಮತದಾರರಿಗೆ ವಿಶ್ವಾಸಾರ್ಹ ಮಾಹಿತಿಯನ್ನು ನೀಡಬೇಕು ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ.

ADVERTISEMENT

ಉಚಿತ ಕೊಡುಗೆಗಳ ಉದ್ದೇಶ ಮತದಾರರನ್ನು ಆಕರ್ಷಿಸುವುದೇ ಆಗಿದೆ. ಆದರೆ, ಕಲ್ಯಾಣ ಕಾರ್ಯಕ್ರಮಗಳು ನೀತಿಯ ಭಾಗವಾಗಿದ್ದು, ಸಮಗ್ರ ಅಭಿವೃದ್ಧಿಯ ಉದ್ದೇಶ ಹೊಂದಿರುತ್ತವೆ ಎಂದು ಪಕ್ಷವು ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ಹೇಳಿದೆ.

ಚುನಾವಣಾ ಭರವಸೆಗಳಿಗೆ ಆರ್ಥಿಕ ನೆರವು ಕುರಿತ ವಿಶ್ವಾಸಾರ್ಹ ಮಾಹಿತಿಯನ್ನು ಮತದಾರರಿಗೆ ನೀಡಬೇಕು ಎಂಬ ಆಯೋಗದ ಚಿಂತನೆಗೆ ತನ್ನ ಸಹಮತವಿದೆ ಎಂದು ಹೇಳಿದೆ.

ಜನರ ಸಬಲೀಕರಣಕ್ಕೆ ಒತ್ತು ನೀಡಬೇಕು ಎಂಬುದು ಬಿಜೆಪಿಯ ನಿಲುವು ಎಂದು ಆಯೋಗಕ್ಕೆ ಬರೆದ ಪತ್ರದ ಕರಡು ರೂಪಿಸಿದ ಮುಖಂಡರೊಬ್ಬರು ತಿಳಿಸಿದರು.

ವಸತಿ ಕಲ್ಪಿಸುವುದು, ಉಚಿತ ಪಡಿತರ ನೀಡುವುದು ಭಿನ್ನವಾದ ಉದ್ದೇಶವಾಗಿದೆ. ಹಾಗೆಯೇ ಉಚಿತವಾಗಿ ವಿದ್ಯುತ್ ನೀಡುವುದರ ಉದ್ದೇಶ ಬೇರೆಯದೇ ಆಗಿದೆ ಎಂದು‍ಪಕ್ಷವು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.