ನವದೆಹಲಿ: ಕೆನರಾ ಬ್ಯಾಂಕ್ ನೇತೃತ್ವದ ಒಕ್ಕೂಟಕ್ಕೆ ₹55.27 ಕೋಟಿ ವಂಚಿಸಿದ ಆರೋಪದ ಮೇಲೆ ದೇಶದಿಂದ ಪರಾರಿಯಾಗಿರುವ ವಜ್ರದ ವ್ಯಾಪಾರಿ ಮೇಹುಲ್ ಚೋಕ್ಸಿ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಹೊಸ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೋಕ್ಸಿ, ಚೇತನಾ ಝಾವೇರಿ, ದಿನೇಶ್ ಭಾಟಿಯಾ ಮತ್ತು ಮಿಲಿಂದ್ ಲಿಮಾಯೆ ಸೇರಿದಂತೆ ಬೆಜೆಲ್ ಜ್ಯೂವೆಲ್ಲರಿ ಹಾಗೂ ಅದರ ಪೂರ್ಣಕಾಲಿಕ ನಿರ್ದೇಶಕರ ಮೇಲೂ ಸಿಬಿಐ ಪ್ರಕರಣ ದಾಖಲಿಸಿದೆ.
ಕೆನರಾ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಮಹಾರಾಷ್ಟ್ರ ಒಪ್ಪಂದದಡಿ ಕ್ರಮವಾಗಿ ₹30 ಕೋಟಿ ಹಾಗೂ ₹20 ಕೋಟಿಯನ್ನು ಕಾರ್ಯನಿರತ ಬಂಡವಾಳ ಸೌಲಭ್ಯವಾಗಿ ಬೆಜೆಲ್ ಜ್ಯೂವೆಲ್ಲರಿಗೆ ಬಿಡುಗಡೆ ಮಾಡಿದ್ದವು. ಆದರೆ, ಚಿನ್ನ ಹಾಗೂ ವಜ್ರಖಚಿತ ಆಭರಣಗಳ ತಯಾರಿಕೆ ಮತ್ತು ಮಾರಾಟಕ್ಕಾಗಿ ನೀಡಲಾದ ಹಣದ ಹರಿವನ್ನು ಮುಚ್ಚಿಡುವ ಉದ್ದೇಶದಿಂದ ಸಂಸ್ಥೆಯು ಯಾವುದೇ ವ್ಯವಹಾರವನ್ನು ಖಾತೆಯ ಮೂಲಕ ನಡೆಸಿಲ್ಲ ಎಂದು ಸಿಬಿಐ ಆರೋಪಿಸಿದೆ.
ಅಲ್ಲದೆ, ಬೆಜೆಲ್ ಹಣವನ್ನು ಹಿಂತಿರುಗಿಸದೇ ಇದ್ದುದರಿಂದ, ಬ್ಯಾಂಕ್ಗಳಿಗೆ ₹55.27 ಕೋಟಿ ನಷ್ಟವಾಗಿದೆ ಎಂದೂ ಸಿಬಿಐ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.