ADVERTISEMENT

ಕೇರಳದಲ್ಲಿ ಗಾಡ್ಗೀಲ್‌ ಮಾತಿನ ಪ್ರತಿಧ್ವನಿ

ಪಶ್ಚಿಮ ಘಟ್ಟ ರಕ್ಷಿಸದಿದ್ದರೆ ರಾಜ್ಯಕ್ಕೆ ದುರಂತ ಕಾದಿದೆ ಎಂದಿದ್ದ ವಿಜ್ಞಾನಿ

ಅರ್ಜುನ್ ರಘುನಾಥ್
Published 16 ಆಗಸ್ಟ್ 2019, 20:00 IST
Last Updated 16 ಆಗಸ್ಟ್ 2019, 20:00 IST
ಕವಳಪ್ಪಾರದಲ್ಲಿನ ಭೂಕುಸಿತ– ಪಿಟಿಐ ಚಿತ್ರ
ಕವಳಪ್ಪಾರದಲ್ಲಿನ ಭೂಕುಸಿತ– ಪಿಟಿಐ ಚಿತ್ರ   

ತಿರುವನಂತಪುರ: ಸತತ ಎರಡನೇ ವರ್ಷವೂ ಕೇರಳವು ಪ್ರವಾಹ ಮತ್ತು ಭೂಕುಸಿತದ ದುರಂತಕ್ಕೆ ಒಳಗಾಗಿದೆ. ಈ ರಾಜ್ಯವು ದೊಡ್ಡ ಪ್ರಮಾಣದ ನೈಸ ರ್ಗಿಕ ವಿಕೋಪಗಳಿಗೆ ಒಳಗಾಗಲಿದೆ ಎಂದು ಪರಿಸರ ವಿಜ್ಞಾನಿ ಮಾಧವ ಗಾಡ್ಗೀಲ್‌ ಅವರು 2013ರಲ್ಲಿ ಹೇಳಿ ದ್ದರು. ಆ ಮಾತು ಕೇರಳದಲ್ಲಿ ಈಗ ಪ್ರತಿ ಧ್ವನಿಸುತ್ತಿದೆ.

ಅತ್ಯಂತ ಸೂಕ್ಷ್ಮ ಪರಿಸರ ಹೊಂದಿ ರುವ ಪಶ್ಚಿಮ ಘಟ್ಟಗಳಲ್ಲಿ ಗಣಿಗಾರಿಕೆಯಂತಹ ಚಟುವಟಿಕೆಯನ್ನು ತಡೆಗಟ್ಟುವಂತೆ ಗಾಡ್ಗೀಲ್‌ ಅವರು ನೀಡಿದ ಶಿಫಾರಸನ್ನು ಕಡೆಗಣಿಸಿದ್ದರ ಬಗ್ಗೆ ಸಿಪಿಎಂನ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ವಿ.ಎಸ್‌. ಅಚ್ಯುತಾನಂದನ್‌ ಕಟುವಾಗಿ ಮಾತ ನಾಡಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಅಕ್ರಮ ನಿರ್ಮಾಣ ಚಟುವಟಿಕೆಗಳನ್ನು ತಕ್ಷಣವೇ ತಡೆಗಟ್ಟಬೇಕು ಮತ್ತು ಪರಿಸರಕ್ಕೆ ಹಾನಿ ಮಾಡುವ ಯಾವುದೇ ಕೆಲಸಕ್ಕೆ ಅನುಮತಿ ನೀಡಬಾರದು ಎಂದು ಅವರು ಆಗ್ರಹಿಸಿದ್ದಾರೆ.

ಸ್ಥಾಪಿತ ಹಿತಾಸಕ್ತಿಯ ಒತ್ತಡಕ್ಕೆ ಸರ್ಕಾರ ಮಣಿದಿದೆ. ಪಶ್ಚಿಮ ಘಟ್ಟ ಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಗಾಡ್ಗೀಲ್‌ ಅವರೂ ಹೇಳಿದ್ದಾರೆ. ಉಳಿದಿರುವ ಪರಿಸರವನ್ನಾದರೂ ರಕ್ಷಿಸ ಬೇಕಾದ ಅಗತ್ಯವಿದೆ ಎಂದು ಅವರು ಒತ್ತಾಯಿಸಿದ್ದಾರೆ.

ADVERTISEMENT

ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿನ ಮಾನವ ಚಟುವಟಿಕೆಗಳಿಗೆ ಕಟ್ಟುನಿಟ್ಟಿನ ನಿರ್ಬಂಧ ಹೇರಬೇಕು ಎಂದು ಗಾಡ್ಗೀಲ್‌ ನೇತೃತ್ವದ ತಜ್ಞರ ಸಮಿತಿಯು 2011ರಲ್ಲಿ ವರದಿ ನೀಡಿತ್ತು. ಆದರೆ, ಈ ವರದಿಗೆ ಭಾರಿ ಪ್ರತಿರೋಧ ಎದುರಾ ಗಿತ್ತು. ಘಟ್ಟ ಪ್ರದೇಶದ ಜನರು ಮತ್ತು ರಾಜಕೀಯ ನಾಯಕರು ಕೂಡ ವರದಿಯನ್ನು ವಿರೋಧಿಸಿದ್ದರು.

ಗಾಡ್ಗೀಲ್‌ ಸಮಿತಿಯ ಕಠಿಣ ಶಿಫಾರಸುಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಸರ್ಕಾರವು ಕೆ. ಕಸ್ತೂರಿರಂಗನ್‌ ನೇತೃತ್ವದ ಸಮಿತಿಯನ್ನು ರಚಿಸಿತು. ಗಾಡ್ಗೀಲ್‌ ಸಮಿತಿಯ ಶಿಫಾರಸುಗಳನ್ನು ಹೊಸ ಸಮಿತಿಯು ಸಾಕಷ್ಟು ಪ್ರಮಾಣದಲ್ಲಿ ದುರ್ಬಲಗೊಳಿಸಿತು.

ಗಾಡ್ಗೀಲ್‌ ಅವರ ಬಗ್ಗೆ ಕೇರಳದಲ್ಲಿ ಭಾರಿ ಟೀಕೆಗಳು ವ್ಯಕ್ತವಾಗಿದ್ದವು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಅವರು, ಪಶ್ಚಿಮ ಘಟ್ಟವನ್ನು ಈ ರೀತಿಯಲ್ಲಿ ನಾಶ ಮಾಡಿದರೆ ದೊಡ್ಡ ದುರಂತಕ್ಕೆ ಕೇರಳ ಬಹಳ ಕಾಲ ಕಾಯಬೇಕಾಗಿ ಬರುವುದಿಲ್ಲ, ನಾಲ್ಕೈದು ವರ್ಷಗಳಲ್ಲಿಯೇ ಅದರ ಫಲ ಕಾಣಿಸಿಕೊಳ್ಳಲಿದೆ ಎಂದಿದ್ದರು.

ಕಳೆದ ವಾರದಲ್ಲಿ ಕೇರಳದಲ್ಲಿ ಸುಮಾರು 70 ಕಡೆ ಭೂಕುಸಿತವಾಗಿದೆ. ಅವುಗಳಲ್ಲಿ ಎರಡು ದೊಡ್ಡ ಮಟ್ಟದ ಕುಸಿತ. ಮಲಪ್ಪುರ ಜಿಲ್ಲೆಯ ಕವಳ ಪ್ಪಾರದ ಭೂಕುಸಿತಕ್ಕೆ ಸಿಲುಕಿ 35 ಮಂದಿ ಜೀವ ತೆತ್ತಿದ್ದಾರೆ. 25 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಈ ಪ್ರದೇಶದಲ್ಲಿ 30 ಕಲ್ಲು ಕ್ವಾರಿಗಳಿರುವುದೇ ಭೂಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ. ವಯನಾಡ್‌ನ ಪುದುಮಲದಲ್ಲಿಯೂ ಭೂಕುಸಿತವಾಗಿದೆ. ಇಲ್ಲಿ ಹತ್ತು ಜನರು ಮೃತಪಟ್ಟಿದ್ದಾರೆ. ಏಲಕ್ಕಿ ಬೆಳೆಸುವುದಕ್ಕಾಗಿ ಭಾರಿ ಪ್ರಮಾಣದಲ್ಲಿ ಮರ ಕಡಿದಿರುವುದೇ ಈ ದುರಂತಕ್ಕೆ ಕಾರಣ ಎಂದು ಕೇರಳದ ಮಣ್ಣು ಸಂರಕ್ಷಣಾ ಇಲಾಖೆಯ ವರದಿ ಹೇಳಿದೆ.

ತೊರೆಗಳ ಮಾರ್ಗ ಬದಲು

ಭೂಮಿ ಕೊರೆತ, ಗಣಿಗಾರಿಕೆ ಮತ್ತು ಮರ ಕಡಿಯುವಿಕೆಯಷ್ಟೇ ಪಶ್ಚಿಮ ಘಟ್ಟ ಗಳನ್ನು ಕಾಡುತ್ತಿರುವ ಸಮಸ್ಯೆಗಳಲ್ಲ. ಈಗಿನ ಸ್ಥಿತಿಗೆ ಬೇರೆ ಹಲವು ಕಾರಣಗಳೂ ಇವೆ ಎಂದು ವಯನಾಡ್‌ ನೇಚರ್‌ ಪ್ರೊಟೆಕ್ಷನ್‌ ಗ್ರೂಪ್‌ನ ಅಧ್ಯಕ್ಷ ಎನ್‌. ಬಾದುಶಾ ಹೇಳುತ್ತಾರೆ. ರಿಸಾರ್ಟ್‌ಗಳ ಮಾಲೀಕರು ನೈಸರ್ಗಿಕ ತೊರೆಗಳ ಮಾರ್ಗ ಬದಲಿಸುತ್ತಿದ್ದಾರೆ, ಗುಡ್ಡಗಳನ್ನು ಸಮತಟ್ಟು ಮಾಡಲಾಗುತ್ತಿದೆ, ಗಣಿಗಾರಿಕೆ ಬಳಿಕ ಕ್ವಾರಿಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಮತ್ತು ಗುಡ್ಡಗಳ ಮೇಲೆ ಮಳೆ ನೀರು ಸಂಗ್ರಹಕ್ಕೆ ಗುಂಡಿ ಮಾಡುತ್ತಿದ್ದಾರೆ. ಇವೆಲ್ಲವೂ ಘಟ್ಟ ಪ್ರದೇಶಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭೀತಿ ಪ್ರದೇಶಗಳು

5,607 ಚದರ ಕಿ.ಮೀ.

ಭೂಕುಸಿತದ ಅಪಾಯ ಇರುವ ಪ್ರದೇಶ

5,624 ಚದರ ಕಿ.ಮೀ

ಪ್ರವಾಹದ ಅಪಾಯ ಇರುವ ಪ್ರದೇಶ

29%

ಕೇರಳದ ಒಟ್ಟು ವಿಸ್ತೀರ್ಣದಲ್ಲಿ ಅಪಾಯ ಎದುರಿಸುತ್ತಿರುವ ಪ್ರದೇಶದ ಪ್ರಮಾಣ

70

ಈ ಬಾರಿ ಭೂಕುಸಿತವಾದ ಹೆಚ್ಚಿನ ಸ್ಥಳಗಳು ಈ ವ್ಯಾಪ್ತಿಯಲ್ಲಿಯೇ ಇವೆ

(ಕೇರಳ ಸರ್ಕಾರದ ವಿಪತ್ತು ನಿರ್ವಹಣಾ ಪ್ರಾಧಿಕಾರ 2018ರಲ್ಲಿ ಕೊಟ್ಟ ವರದಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.