ADVERTISEMENT

ಹಿಂದೂಗಳು ಮಟನ್ ತಿನ್ನಬೇಡಿ, ಯಾಕೆಂದರೆ ಗಾಂಧೀಜಿ ಮೇಕೆಯನ್ನು 'ಮಾತೆ' ಎಂದಿದ್ದರು!

​ಪ್ರಜಾವಾಣಿ ವಾರ್ತೆ
Published 31 ಜುಲೈ 2018, 3:09 IST
Last Updated 31 ಜುಲೈ 2018, 3:09 IST
ಚಂದ್ರ ಕುಮಾರ್ ಬೋಸ್
ಚಂದ್ರ ಕುಮಾರ್ ಬೋಸ್   

ಕೊಲ್ಕತ್ತಾ: ಗೋಮಾತೆ ಮತ್ತು ಬೀಫ್ ಸೇವನೆ ಬಗ್ಗೆ ದೇಶದಾದ್ಯಂತ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ಬಿಜೆಪಿ ನೇತಾರರೊಬ್ಬರು ಮೇಕೆಯನ್ನೂ 'ಮಾತೆ' ಪಟ್ಟಿಗೆ ಸೇರಿಸಿ ಅಚ್ಚರಿಯುಂಟು ಮಾಡಿದ್ದಾರೆ.

ಗಾಂಧೀಜಿಯವರು ಮೇಕೆ ಹಾಲು ಕುಡಿಯುತ್ತಿದ್ದುದರಿಂದ ಅದನ್ನು ಮಾತೆ ಎಂದು ಪರಿಗಣಿಸುತ್ತಿದ್ದರು. ಹಾಗಾಗಿ ಹಿಂದೂಗಳು ಮೇಕೆಯನ್ನು ಮಾತೆ ಎಂದು ಪರಿಗಣಿಸಿ ಮಟನ್ ಸೇವನೆ ನಿಲ್ಲಿಸಬೇಕು ಎಂದು ಪಶ್ಚಿಮ ಬಂಗಾಳದ ಬಿಜೆಪಿ ಉಪಾಧ್ಯಕ್ಷ ಚಂದ್ರ ಕುಮಾರ್ ಬೋಸ್ ಟ್ವೀಟಿಸಿದ್ದಾರೆ.ಚಂದ್ರ ಕುಮಾರ್ ಬೋಸ್ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಸಂಬಂಧಿ.

ಗಾಂಧೀಜಿ ಅವರು ಕೊಲ್ಕತ್ತಾದ ವುಡ್‍ಬರ್ನ್ ಪಾರ್ಕ್ ನಲ್ಲಿರುವ ನನ್ನ ತಾತ ಸರತ್ ಚಂದ್ರ ಬೋಸ್ ಅವರ ಮನೆಯಲ್ಲಿ ವಾಸವಾಗಿದ್ದರು. ಅಲ್ಲಿ ಅವರು ಮೇಕೆ ಹಾಲನ್ನೇ ಸೇವಿಸುತ್ತಿದ್ದರು. ಅಲ್ಲಿ ಹಾಲಿಗಾಗಿಯೇ ಎರಡು ಮೇಕೆಗಳನ್ನು ಖರೀದಿಸಲಾಗಿತ್ತು. ಹಿಂದೂಗಳ ರಕ್ಷಕನಾಗಿದ್ದ ಗಾಂಧಿ ಮೇಕೆ ಹಾಲು ಸೇವಿಸುತ್ತಿದ್ದುದರಿಂದ ಮೇಕೆಯನ್ನು ಮಾತೆ ಎಂದು ಪರಿಗಣಿಸುತ್ತಿದ್ದರು.ಹಿಂದೂಗಳು ಮೇಕೆ ಮಾಂಸ ಸೇವನೆ ನಿಲ್ಲಿಸಬೇಕು ಎಂದು ಬೋಸ್ ಟ್ವೀಟ್ ಮಾಡಿದ್ದಾರೆ.

ADVERTISEMENT

ಬೋಸ್ ಅವರ ಈ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಬಿಜೆಪಿ ಹಿರಿಯ ನಾಯಕ, ತ್ರಿಪುರಾ ರಾಜ್ಯಪಾಲ ತಥಾಗತ ರಾಯ್ ಅವರು, ಗಾಂಧೀಜಿ ಅಥವಾ ನಿಮ್ಮ ತಾತ ಮೇಕೆಯನ್ನು ಯಾವತ್ತೂ ಮಾತೆ ಎಂದು ಪರಿಗಣಿಸಿಲ್ಲ. ಸ್ವತಃ ಗಾಂಧೀಜಿಯಾಗಲೀ ಬೇರೆ ಯಾರೇ ಆಗಲಿ, ಗಾಂಧೀಜಿ ಹಿಂದೂಗಳ ರಕ್ಷಕ ಎಂದು ಬಿಂಬಿಸಿಲ್ಲ. ನಾವು ಗೋವುಗಳನ್ನು ಮಾತೆ ಎಂದು ಪರಿಗಣಿಸುತ್ತೇವೆಯೇ ಹೊರತು ಮೇಕೆಯನ್ನಲ್ಲ, ದಯವಿಟ್ಟು ಈ ರೀತಿ ಅಸಂಬದ್ಧ ಮಾತುಗಳನ್ನಾಡಬೇಡಿ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.