ಮುಂಬಯಿ: ವಾರಾಂತ್ಯದಲ್ಲಿ ನಡೆದ ಗಣೇಶ ಮೂರ್ತಿ ವಿಸರ್ಜನೆ ವೇಳೆ ಮಹಾರಾಷ್ಟ್ರದಾದ್ಯಂತ 10ಕ್ಕೂ ಹೆಚ್ಚು ಜನರು ಮೃಪಟ್ಟಿದ್ದು ಐವರು ಗಾಯಗೊಂಡಿದ್ದಾರೆ. ಅಲ್ಲದೆ, ಅನೇಕರು ಜನರು ನಾಪತ್ತೆಯಾಗಿದ್ದಾರೆ.
ರಾಜ್ಯದಾದ್ಯಂತ ನಡೆದ ಪ್ರತ್ಯೇಕ ಘಟನೆಗಳಲ್ಲಿ ಹೆಚ್ಚಿನವರು ನೀರಲ್ಲಿ ಮುಳುಗಿ ಮೃತಪಟ್ಟಿದ್ದು, ಮುಂಬೈಯಲ್ಲಿ ವಿದ್ಯುತ್ ಅಘಾತದಿಂದಾಗಿ ದುರಂತ ಸಂಭವಿಸಿರುವ ಉದಾಹರಣೆಗಳೂ ಇವೆ.
ಮುಂಬೈನ ಕುರ್ಲಾದ ಖೈರಾನಿ ರಸ್ತೆಯಲ್ಲಿ ನೇತಾಡುತ್ತಿದ್ದ ತಂತಿಯು ಗಣೇಶ ಮೂರ್ತಿಗೆ ತಗುಲಿ ಆರು ಜನರಿಗೆ ವಿದ್ಯುದಾಘಾತವಾಗಿದೆ. ಘಟನೆಯಲ್ಲಿ ಸುಕುಮಾರನ್ ಕುಮಾರನ್ (36) ಮೃತಪಟ್ಟಿದ್ದು, ಇಬ್ಬರು ಬಾಲಕರು ಸೇರಿ ಐವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮತ್ತೊಂದು ದುರಂತವು ಠಾಣೆ ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿ ಗಣೇಶ ವಿಸರ್ಜನೆ ಸಂದರ್ಭ ಭಾರಂಗಿ ನದಿಯಲ್ಲಿ ಸಂಭವಿಸಿದೆ. ಐವರು ನೀರಿನಲ್ಲಿ ಮುಳುಗಿದ್ದು, ಪ್ರತೀಕ್ ಮುಂಡೆ ಎಂಬವರು ಮೃತಪಟ್ಟಿದ್ದಾರೆ. ಇಬ್ಬರನ್ನು ರಕ್ಷಿಸಲಾಗಿದ್ದು, ಇನ್ನಿಬ್ಬರ ಶೋಧ ಕಾರ್ಯ ನಡೆಯುತ್ತಿದೆ.
ಪುಣೆ ಜಿಲ್ಲೆಯಲ್ಲಿ ಸಂಭವಿಸಿದ ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ನೀರುಪಾಲಾಗಿದ್ದು, ಇಬ್ಬರ ಮೃತ ಶರೀರ ಪತ್ತೆಯಾಗಿದೆ. ಇನ್ನಿಬ್ಬರ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.
ನಾಂದೇಡ್ ಜಿಲ್ಲೆಯಲ್ಲಿ ಗಡೇಗಾಂವ್ನ ನದಿಯೊಂದರಲ್ಲಿ ಮೂವರು ಕೊಚ್ಚಿಕೊಂಡು ಹೋಗಿದ್ದು, ಒಬ್ಬರನ್ನು ರಕ್ಷಿಸಲಾಗಿದೆ. ಉಳಿದ ಇಬ್ಬರ ಪತ್ತೆ ಕಾರ್ಯ ಮುಂದುವರೆದಿದೆ. ನಾಸಿಕ್ ಜಿಲ್ಲೆಯಲ್ಲಿ ನಾಲ್ವರು ಕೊಚ್ಚಿಕೊಂಡು ಹೋಗಿದ್ದು, ಒಬ್ಬರ ಮೃತದೇಹ ಪತ್ತೆಯಾಗಿದೆ. ಜಲಗಾಂವ್ನಲ್ಲಿ ನಡೆದ ಪತ್ಯೇಕ ಘಟನೆಗಳಲ್ಲಿ ಮೂವರು ಕೊಚ್ಚಿಕೊಂಡು ಹೋಗಿದ್ದು, ಶೋಧ ಕಾರ್ಯ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.