ಲಖನೌ (ಪಿಟಿಐ); ಮೂರು ದಶಕಗಳ ಹಿಂದೆ ಕಾಂಗ್ರೆಸ್ ನಾಯಕನ ಸಹೋದರ ಅವಧೇಶ್ ರಾಯ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾತಕಿ ಮುಖ್ತಾರ್ ಅನ್ಸಾರಿಗೆ ವಾರಾಣಸಿ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಮಾಜಿ ಶಾಸಕ ಅಜಯ್ ರಾಯ್ ಅವರ ಸಹೋದರ ಅವಧೇಶ್ ರಾಯ್ ಅವರನ್ನು 1991ರ ಆಗಸ್ಟ್ 3ರಂದು ವಾರಾಣಸಿಯ ಲಾಹುರಾಬೀರ್ ನಿವಾಸದ ಬಳಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಮುಖ್ತಾರ್ ಅನ್ಸಾರಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಸಂಸದರ/ಶಾಸಕರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅವನೀಶ್ ಗೌತಮ್ ಅವರು ಈ ಪ್ರಕರಣದಲ್ಲಿ ಅನ್ಸಾರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ ಎಂದು ವಕೀಲರು ಸುದ್ದಿಗಾರರಿಗೆ ತಿಳಿಸಿದರು.
ಅನ್ಸಾರಿ ಶಿಕ್ಷೆಗೆ ಗುರಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅಜಯ್ ರಾಯ್, ‘ಹಲವು ವರ್ಷಗಳ ಕಾಯುವಿಕೆ ಅಂತ್ಯವಾಗಿದೆ. ನಾನು, ನನ್ನ ಪೋಷಕರು, ಅವಧೇಶ್ ಅವರ ಮಗಳು ಮತ್ತು ಇಡೀ ಕುಟುಂಬ ತಾಳ್ಮೆ ಕಾಯ್ದುಕೊಂಡಿದ್ದೇವೆ. ನಮ್ಮ ವಕೀಲರ ಪ್ರಯತ್ನದಿಂದಾಗಿ ನ್ಯಾಯಾಲಯ ಮುಖ್ತಾರ್ ನನ್ನು ತಪ್ಪಿತಸ್ಥನೆಂದು ಘೋಷಿಸಿದೆ’ ಎಂದು ಹೇಳಿದರು.
ಮೌ ಸಾದರ್ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿದ್ದ ಅನ್ಸಾರಿ 2022ರಲ್ಲಿ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಈ ಕ್ಷೇತ್ರದಿಂದ ಅನ್ಸಾರಿ ಮಗ ಅಬ್ಬಾಸ್ ಅನ್ಸಾರಿ ಆಯ್ಕೆಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.